HOSANAGARA ; ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮಕ್ಕಳಿಗೆ ಪೋಷ್ಠಿಕಾಂಶ ಪದಾರ್ಥ ನೀಡುವುದಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಪ್ರತಿಭಟಿಸಿ ಅಂಗನವಾಡಿ ಕೊಠಡಿಗೆ ಬೀಗ ಹಾಕಿರುವ ಘಟನೆ ಮಂಗಳವಾರ ನಡೆದಿದೆ.
ಮಳಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶಾಲಿನಿಯವರು ಸರಿಯಾಗಿ ಅಂಗನವಾಡಿಗೆ ಬರುತ್ತಿಲ್ಲ ವಾರದಲ್ಲಿ 2 ದಿನ ಮಾತ್ರ ಅಂಗನವಾಡಿಗೆ ಹಾಜರಾಗುತ್ತಾರೆ. ಮಕ್ಕಳಿಗೆ ಸರ್ಕಾರದಿಂದ ನೀಡುವ ಯಾವುದೇ ಸೌಲಭ್ಯವನ್ನು ಸರಿಯಾಗಿ ನೀಡುತ್ತಿಲ್ಲ. ಮಕ್ಕಳಿಗೆ ನೀಡುವ ಶೇಂಗಾಚಿಕ್ಕಿ, ಮೊಟ್ಟೆ ಇತ್ಯಾದಿಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೇ ಪೋಷಕರು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ.
ಗರ್ಭಿಣಿ, ಬಾಣಂತಿಯವರಿಗೆ ಸರ್ಕಾರದಿಂದ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಮಳಲಿ ಅಂಗನವಾಡಿಗೆ ಹಿಂದುಳಿದ ವರ್ಗದ ಮಕ್ಕಳು ಹೆಚ್ಚಾಗಿ ಬರುತ್ತಿದ್ದು ಆ ಮಕ್ಕಳಿಗೆ ಅ.ಆ ಇ.ಈ ಸಹ ಇನ್ನೂ ಕಲಿಸಿಕೊಟ್ಟಿಲ್ಲ ಎಂದು ದೂರು ನೀಡಿ, ಹೊಸನಗರದ ಶಿಶು ಅಭಿವೃದ್ಧಿ ಇಲಾಖೆಗೆ ಆ. 16ರಂದು ದೂರು ನೀಡಿದ್ದು ತಾತ್ಕಾಲಿಕವಾಗಿ ಬೇರೆ ಕಾರ್ಯಕರ್ತೆಯನ್ನು ನೇಮಿಸಿದ್ದು ಈಗ ಪುನಃ ಶಾಲಿನಿಯವರನ್ನೆ ನೇಮಕ ಮಾಡಿದ್ದಾರೆ ಎಂದು ದೂರಿ ಬೇರೆ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸುವವರೆಗೆ ಅಂಗನವಾಡಿ ಬಾಗಿಲು ತೆಗೆಯಲು ಬೀಡುವುದಿಲ್ಲ ಎಂದು ಬಾಗಿಲಿಗೆ ಬೀಗ ಹಾಕಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ

ಅಂಗನವಾಡಿಗೆ ಬೀಗ ಹಾಕುವ ಸಂದರ್ಭದಲ್ಲಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಗ್ರಾಮಸ್ಥರಾದ ಸುಶೀಲ, ಪ್ರೇಮ, ವೀಣಾ, ಶೃತಿ, ಗಂಗಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

