ಹೊಸನಗರ ; ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಭೇದವಿಲ್ಲದೆ ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಮತ್ತು ಆಚರಿಸಬೇಕು ಎಂದು ಹೊಸನಗರದ ನೂತನ ತಹಸೀಲ್ದಾರ್ ಭರತ್ ರಾಜ್ ಹೇಳಿದರು.
ಇಲ್ಲಿನ ನೆಹರು ಮೈದಾನದಲ್ಲಿ ವಿವಿಧ ಸಂಘ-ಸಂಸ್ಥೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ ಪಟ್ಟಣ ಪಂಚಾಯತಿ ಹಾಗೂ ನಾಡಹಬ್ಬಗಳ ಸಮಿತಿಯ ಸಂಯುಕ್ತಾಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಕನ್ನಡನಾಡು ಶ್ರೀ ಗಂಧದ ಬೀಡು ಕರುನಾಡು ಕನ್ನಡಾಂಬೆಯ ನಾಡು ಎಂದೆಲ್ಲಾ ಹೆಸರುಗಳಿಂದ ಕರೆಯಲ್ಪಡುತ್ತದೆ ಹಚ್ಚ ಹಸುರಿನ ಸುಂದರ ಬೆಟ್ಟ ಗುಡ್ಡಗಳು ಜುಳು-ಜುಳು ಹರಿಯುವ ನದಿಗಳು ಮತ್ತು ಸಾಧು ಸಂತರು, ದಾಸರು, ಶಿವಶರಣರು ಹಾಗೂ ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡನಾಡು ಎಂಬ ಹೆಸರೇ ಒಂದು ದೀಮಂತ ಶಕ್ತಿ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಅಥವಾ ಕನ್ನಡದ ದಿನ ಎಂದು ಆಚರಿಸುತ್ತೇವೆ. ಇದನ್ನು ಕರ್ನಾಟಕ ರಚನೆಯ ದಿನವೆಂದು ಕರೆಯಲಾಗುತ್ತದೆ. 1956 ರಲ್ಲಿ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಆಲೂರು ವೆಂಕಟರಾವ್ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ 1950 ರಲ್ಲಿ ಭಾರತ ದೇಶವು ಗಣರಾಜ್ಯವಾಯಿತು ನಿರ್ಧಿಷ್ಠ ಪ್ರದೇಶಗಳಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳು ರಚನೆಯಾದವು ಅದರಲ್ಲಿ ಮೈಸೂರು ರಾಜ್ಯವು ಒಂದು. ನವೆಂಬರ್ 1 1956 ರಂದು ಮೈಸೂರು ಸಂಸ್ಥಾನವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶಗಳನ್ನು ಒಳಗೊಂಡಿತ್ತು. ಉತ್ತರ ಕರ್ನಾಟಕದ ಜನರು ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ ಏಕೆಂದರೆ ಇದು ಹಿಂದಿನ ಸಂಸ್ಥಾನದ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ತರ್ಕಕ್ಕೆ ಅನುಗುಣವಾಗಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಹೆಸರನ್ನು ನವೆಂಬರ್ 1 1973 ರಲ್ಲಿ ಬದಲಾಯಿಸಲಾಯಿತು. ಕರ್ನಾಟಕ ಏಕೀಕರಣಕ್ಕೆ ಕೀರ್ತಿತಂದ ಇತರೆ ವ್ಯಕ್ತಿಗಳಲ್ಲಿ ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್ ಕೃಷ್ಣರಾವ್ ಮತ್ತು ಬಿ.ಎಂ ಶ್ರೀ ಕಂಠಯ್ಯ ಮುಂತಾದವರ ಕೊಡುಗೆ ನೀಡಿದ್ದು ಇವರೆಲ್ಲರ ಪರಿಶ್ರಮದಿಂದ ಇಂದು ನಮ್ಮ ಕನ್ನಡ ಭಾಷೆ ಉಳಿದಿದೆ ಎಂದರು.
ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್ ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡನಾಡಿನ ಸಾಹಿತಿಗಳು ಕನ್ನಡದ ಹಾಡುಗಳನ್ನು ಸಂಪಾಗಿ ರಚಿಸಿ ಹಾಡಿದ್ದು ಆ ಕನ್ನಡ ಹಾಡಿನ ಸಂಪನ್ನು ಮೈಗೂಡಿಸಿಕೊಂಡು ಕನ್ನಡನಾಡು ನುಡಿಯೊಂದಿಗೆ ಅವರು ಹಾಕಿಕೊಟ್ಟ ಕನ್ನಡನಾಡಿನ ಸೊಬಗನ್ನು ದೇಶದ್ಯಾಂತ ವಿಸ್ತರಿಸೋಣ ಹಾಗೂ ಮೈಗೂಡಿಸಿಕೊಂಡು ನಡೆಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಪಸರಿಸೋಣ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ನಾಡಗೀತೆ ಕನ್ನಡ ಗೀತೆ ಹಾಗೂ ಸರ್ಕಾರಿ ಶಾಲೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ದೈಹಿಕ ಪರೀವಿಕ್ಷಕ ವಿನಯ್ ಹೆಗಡೆ ಕರ್ಕಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ್ ಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್, ಸಬ್ ಇನ್ಸ್ಪೆಕ್ಟರ್ ಶಂಕರ ಗೌಡ ಪಾಟೀಲ್, ಪಟ್ಟಣ ಪಂಚಾಯತಿ ಬಸವರಾಜ್, ಶಿರಾಸ್ಥೆದಾರ್ ಚಿರಾಗ್, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ವರ್ತಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಧನಂಜಯ, ಸುಹಾಸ್, ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ರಾಧಿಕ ರತ್ನಾಕರ ಶೆಟ್ಟಿ, ಲೋಹಿತ್, ಸಿದ್ದಪ್ಪ, ಅಶೋಕ, ನವೀನ್, ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರುಗಳು ಸಿಬ್ಬಂದಿಗಳು ತಾಲ್ಲೂಕು ಆಡಳಿತದ ಎಲ್ಲ ಸಿಬ್ಬಂದಿಗಳು, ತಾಲ್ಲೂಕು ಪಂಚಾಯತಿಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





