ಶಿವಮೊಗ್ಗ :ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿರುವ ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿ ಪರಿಷ್ಕರಣೆಗೆ ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದೆ, ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿದ ಖಂಡ್ರೆ, “1974ರ ನವೆಂಬರ್ನಲ್ಲಿ ಶೆಟ್ಟಿಹಳ್ಳಿ ವನ್ಯಜೀವಿಧಾಮ ಎಂದು ಅಧಿಸೂಚನೆ ಮಾಡಲಾಗಿದ್ದು, ಅದರ ವಿಸ್ತೀರ್ಣವನ್ನು ಆರಂಭದಲ್ಲಿ 395.60 ಚದರ ಕಿಲೋಮೀಟರ್ ಆಗಿ ನಿಗದಿ ಮಾಡಲಾಗಿತ್ತು,” ಎಂದರು.
ಈಗ 396.165 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಉಳಿಸಿಕೊಂಡು, ಆದರೆ ಮೂಲ ವಿಸ್ತೀರ್ಣಕ್ಕೆ ಹಾನಿಯಾಗದ ರೀತಿಯಲ್ಲಿ ಗಡಿಗಳನ್ನು ಪರಿಷ್ಕರಿಸಿ ಹೊಸ ಅಧಿಸೂಚನೆ ಹೊರಡಿಸಲು ಸಂಪುಟ ಸಮ್ಮತಿಸಿದೆ ಎಂದು ವಿವರಿಸಿದರು.
1974ರ ನವೆಂಬರ್ ನಲ್ಲಿ ವನ್ಯಜೀವಿಧಾಮ ಎಂದು ಅಧಿಸೂಚನೆ ಆದಾಗ, ಅದರಲ್ಲಿ ರಸ್ತೆ, ಬಸ್ ನಿಲ್ದಾಣ, ಜನವಸತಿ ಪ್ರದೇಶ, ಪಟ್ಟಾಭೂಮಿ, ಶರಾವತಿ ಮುಳುಗಡೆ ಪುನರ್ವಸತಿಗಾಗಿ ಗುರುತಿಸಿರುವ ಪ್ರದೇಶ ಇತ್ಯಾದಿಯೂ ಸೇರ್ಪಡೆಯಾಗಿತ್ತು. ಜನರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಗಡಿ ಪರಿಷ್ಕರಣೆ ಮಾಡಲು ಇಲಾಖೆ ತೀರ್ಮಾನಿಸಿ, ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಲಾಗಿತ್ತು ಎಂದು ವಿವರಿಸಿದರು.