ಶಿವಮೊಗ್ಗ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಆಗಸ್ಟ್ 27, 2025ರಿಂದ ಸೆಪ್ಟೆಂಬರ್ 15, 2025ರವರೆಗೆ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಆ.27ರಂದು ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ನಂತರ ವಿವಿಧ ದಿನಗಳಲ್ಲಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಒಟ್ಟು 20 ದಿನಗಳ ಕಾಲ ಪ್ರಮುಖ ಹಾಗೂ ಅತಿಸೂಕ್ಷ್ಮ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಇದೇ ಅವಧಿಯಲ್ಲಿ, ಸೆಪ್ಟೆಂಬರ್ 5ರಿಂದ 10ರವರೆಗೆ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದಾರೆ.
ಡಿಜೆ ಸಿಸ್ಟಂ ಬಳಕೆಯಿಂದ ವಿದ್ಯಾರ್ಥಿಗಳು, ವೃದ್ಧರು, ಆಸ್ಪತ್ರೆಯ ರೋಗಿಗಳು ತೊಂದರೆ ಅನುಭವಿಸುವ ಸಾಧ್ಯತೆಗಳಿದ್ದು, ಕಾನೂನು-ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದು. ಆದ್ದರಿಂದ ಹಬ್ಬಗಳ ಅವಧಿ ಪೂರ್ಣಗೊಳ್ಳುವವರೆಗೆ ಡಿಜೆ ಸಿಸ್ಟಂ ನಿಷೇಧವು ಕಟ್ಟುನಿಟ್ಟಾಗಿ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗಣಪತಿ ವಿಸರ್ಜನೆಗೆ ತೆಪ್ಪ ಬಳಕೆಗೆ ನಿಯಮ – ಲೈಫ್ ಜಾಕೆಟ್ ಕಡ್ಡಾಯ
ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗಣಪತಿ ವಿಸರ್ಜನೆ ವೇಳೆ ನದಿ, ಕೆರೆ ಅಥವಾ ಹಿನ್ನೀರು ಪ್ರದೇಶಗಳಲ್ಲಿ ತೆಪ್ಪ ಬಳಕೆ ಮಾಡಿದಲ್ಲಿ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯವಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ, ತೆಪ್ಪದಲ್ಲಿ ಗರಿಷ್ಠ 2ರಿಂದ 3 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೊತೆಗೆ ನುರಿತ ಈಜುಗಾರರ ಸಮ್ಮುಖದಲ್ಲೇ ವಿಸರ್ಜನೆ ನಡೆಸಬೇಕು.
ಈ ಕ್ರಮ, ಹಿಂದಿನ ವರ್ಷಗಳಲ್ಲಿ ಸಂಭವಿಸಿದ ದುರ್ಘಟನೆಗಳ ಹಿನ್ನೆಲೆ ಕೈಗೊಳ್ಳಲಾಗಿದೆ. ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದ ತೆಪ್ಪ ಮಗುಚಿ 12 ಜನ ಸಾವನ್ನಪ್ಪಿದ ಘಟನೆ ಮರುಕಳಿಸದಂತೆ ವಿಶೇಷ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಆ.27 ರಿಂದ ಸೆ.15 ರವರೆಗೆ ಬೈಕ್ ರ್ಯಾಲಿ ನಿಷೇಧ
ಶಿವಮೊಗ್ಗ ನಗರ ಹಾಗೂ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಹಾಗೂ ಸುಸಂಸ್ಕೃತ ವಾತಾವರಣದಲ್ಲಿ ಆಚರಿಸಲು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಬೈಕ್ ರ್ಯಾಲಿಗಳ ನಿರ್ಬಂಧ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಜಾರಿಗೊಳಿಸಿರುವ ಈ ಆದೇಶವು ಆಗಸ್ಟ್ 27ರಿಂದ ಸೆಪ್ಟೆಂಬರ್ 15ರವರೆಗೆ ಅನ್ವಯವಾಗಲಿದೆ.
ಹಬ್ಬಗಳ ಸಮಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಕ್ರಮ
ಗಣೇಶ ಹಬ್ಬ ಮತ್ತು ಈದ್ ಮಿಲಾದ್, ಎರಡೂ ಸಮುದಾಯಗಳಿಗೆ ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಾಗಿದ್ದು, ಸಾಮೂಹಿಕ ಉತ್ಸಾಹ, ಭಕ್ತಿ, ಹಾಗೂ ಸಾಂಸ್ಕೃತಿಕ ವೈಭವದಿಂದ ಕೂಡಿರುತ್ತವೆ. ಆದರೆ, ಹಬ್ಬಗಳ ಸಂದರ್ಭಗಳಲ್ಲಿ ಕೆಲವೊಮ್ಮೆ ಅಸಮಜ್ಜಿ, ತಪ್ಪು ಮಾಹಿತಿ ಹರಡುವುದು, ಅಥವಾ ಆಕಸ್ಮಿಕ ಘಟನೆಗಳಿಂದ ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.
ಬೈಕ್ ರ್ಯಾಲಿಗಳು ಹೆಚ್ಚಾಗಿ ಗುಂಪು ಸೇರುವಿಕೆ, ಗದ್ದಲ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಅಡಚಣೆ ಉಂಟುಮಾಡಬಹುದು. ಕೆಲ ಸಂದರ್ಭಗಳಲ್ಲಿ ಇವು ಅಹಿತಕರ ಘಟನೆಗಳಿಗೆ ಕಾರಣವಾಗಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧ ಹೇರಲಾಗಿದೆ.
ವಿಶ್ವ ಆನೆಗಳ ದಿನಾಚರಣೆ 2025 : ಸಕ್ರೆಬೈಲು ಶಿಬಿರದ ಆನೆ ಮರಿಗಳಿಗೆ ನಾಮಕರಣ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.