ರಿಪ್ಪನ್ಪೇಟೆ ; ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮೀತಿ ಮೀರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ಖಂಡಿಸುವ ಪ್ರವೃತ್ತಿ ಸಹ ಇಲ್ಲದಂತಾಗಿದೆ. ನಮ್ಮ ಯುವಕರಲ್ಲಿ ಹೋರಾಟದ ಮನೋಭಾವನೆ ಕಡಿಮೆಯಾಗುತ್ತಿರುವ ಬಗ್ಗೆ ಮಾಜಿ ಸಚಿವ ಹರತಾಳು ಹಾಲಪ್ಪ ಖೇದ ವ್ಯಕ್ತಪಡಿಸಿದರು.
ಹರತಾಳು ಗ್ರಾಮದ ತಮ್ಮ ಸ್ವಗೃಹದಲ್ಲಿ ಭೂಮಿ ಹುಣ್ಣಿಮೆ ಹಬ್ಬದ ದಿನ ಭೂತಾಯಿಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಹಕ್ಕು ಪಡೆದುಕೊಳ್ಳಲು ಹೋರಾಟ ಅನಿವಾರ್ಯವಾಗಿದ್ದರೂ ಕೂಡಾ ಇತ್ತೀಚಿನ ವರ್ಷಗಳಲ್ಲಿ ಯುವಕರು ಹೋರಾಟದಿಂದ ವಿಮುಖರಾಗುತ್ತಿದ್ದಾರೆ. ಕಾರಣ ಉದ್ಯೋಗದ ಒತ್ತಡದ ಬದುಕಿನಿಂದಾಗಿ ಕೇಳಿದಷ್ಟು ಹಣವನ್ನು ಕೊಡುವ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ ಸಂಗತಿಯಾಗಿದೆ.ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ನೇಪಾಳದಲ್ಲಿ ನಡೆದಂತೆ ನಮ್ಮ ರಾಜ್ಯದಲ್ಲಿಯೂ ನಡೆಯುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿ ಈ ನಿಟ್ಟಿನಲ್ಲಿ ಯುವಜನಾಂಗ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಅರಣ್ಯ, ಶಿಕ್ಷಣ ಆರೋಗ್ಯ ಕಂದಾಯ ಸರ್ವೇ ಇಲಾಖೆ ಪೊಲೀಸ್ ಇಲಾಖೆಯಂತಹ ಸಾರ್ವಜನಿಕ ಕಛೇರಿಗಳಲ್ಲಿ ಯಾರ ಭಯವೂ ಇಲ್ಲದೆ ಅವ್ಯಾಹಿತವಾಗಿ ಭ್ರಷ್ಟಾಚಾರ ತಾಂಡವಾಡುವಂತಾಗಿದೆ. ಸರ್ಕಾರದ ವೇತನವನ್ನು ತಗೆದುಕೊಂಡರೂ ಕೂಡಾ ಸಾರ್ವಜನಿಕರನ್ನು ಸುಲಿಗೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ನಮ್ಮ ಯುವಜನಾಂಗ ಜಾಗೃತರಾಗುವುದರೊಂದಿಗೆ ಪ್ರಶ್ನಿಸುವ ಪ್ರವೃತ್ತಿ ಬೆಳಸಿಕೊಂಡು ಹೋರಾಟಕ್ಕೆ ಸಜ್ಜಾಗುವಂತಾಗ ಬೇಕು ಆಗ ಲಂಚಗುಳಿ ತನವನ್ನು ಮಟ್ಟ ಹಾಕಲು ಸಾಧ್ಯವೆಂದರು.
ಹೋರಾಟಗಾರರು ಇಲ್ಲ !
ಇತ್ತೀಚಿನ ವರ್ಷಗಳಲ್ಲಿ ಹೋರಾಟಗಳು ಸಹ ಇಲ್ಲದಂತಾಗಿದೆ. ಹಿಂದೆ ಮಹಾತ್ಮ ಗಾಂಧಿಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವುದು ಬಗರ್ ಹುಕುಂ ಹಕ್ಕುಪತ್ರಕ್ಕಾಗಿ ಹಾಗೂ ಉಳುವವನೆ ಹೊಲದೊಡೆಯ, ಕಾಗೋಡು ಹೋರಾಟ ಹೀಗೆ ಹತ್ತು ಹಲವು ಹೋರಾಟಗಳೊಂದಿಗೆ ಶಿವಮೊಗ್ಗ ಜಿಲ್ಲೆ ಈಗ ಹೋರಾಟಗಾರರಿಲ್ಲದೆ ಬಡವಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.