ರಿಪ್ಪನ್ಪೇಟೆ ; ನಮ್ಮ ದೇಶವು ಆಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು ಎಲ್ಲ ರಂಗದಲ್ಲಿಯೂ ತನ್ನದೆ ಅದ ಛಾಪು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯಾದ ಹಲವು ಜನಹಿತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮರಣ ಹೊಂದಿದ ಯಜಮಾನನ ಹೆಸರಿನಲ್ಲಿದ್ದ ಜಮೀನಿನ ಪೌತಿ ಖಾತಾ ಬದಲಾವಣೆಯಿಂದ ಕುಟುಂಬ ಸದಸ್ಯರಿಗೆ ಪ್ರಯೋಜನವಾಗುವಂತಹ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿದೆ ಎಂದು ಹೊಸನಗರ ತಹಸೀಲ್ದಾರ್ ಭರತ್ರಾಜ್ ಕರೆ ನೀಡಿದರು.
ಇಲ್ಲಿನ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಕಂದಾಯ ಇಲಾಖೆಯವರು ಏರ್ಪಡಿಸಲಾಗಿದ್ದ ಇ-ಪೌತಿ ಖಾತಾ ಜನಾಂದೋಲನ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪೌತಿ ಖಾತಾ ಬದಲಾವಣೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ರಾಜ್ಯವಾಪ್ತಿ ಜನಾಂದೋಲನ ರೂಪಿಸಿ ಸಮಯ ನಿಗದಿಗೊಳಿಸಿದ್ದಾರೆ. ಹಾಗೆಯೇ ಕಂದಾಯ ಅಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ತೆರಳಿ ಸಂಬಂಧಿತ ದಾಖಲೆ ಪಡೆದುಕೊಂಡು ಪೌತಿ ಖಾತಾ ಬದಲಾವಣೆ ಪ್ರಕ್ರಿಯೆ ಮಾಡುತ್ತಿದ್ದೇವೆ ಆದರೂ ಕೆಲವರು ಆಸಕ್ತಿ ವಹಿಸುತ್ತಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮರಣ ಹೊಂದಿದ ಮನೆಯ ಯಜಮಾನನ ಹೆಸರಿನಲ್ಲಿರುವ ಜಮೀನು ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತಾ ಬದಲಾವಣೆಯಾಗದಿದ್ದಲ್ಲಿ ಬೆಳೆವಿಮೆ ಪರಿಹಾರ ಸಾಲ-ಸೌಲಭ್ಯ ಇನ್ನಿತರ ಸರ್ಕಾರಿ ಸವಲತ್ತುಗಳು ಸಿಗುವುದಿಲ್ಲ. ಆ ಕಾರಣ ಸರ್ಕಾರ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದರೊಂದಿಗೆ ಪೌತಿ ಖಾತಾವನ್ನು ಸರಳೀಕರಣ ಮಾಡಲಾಗಿದ್ದು ಮೃತನ ಮರಣ ಪ್ರಮಾಣ ಪತ್ರವನ್ನು ಸ್ಥಳ ಮಹಜರಿನೊಂದಿಗೆ ದಾಖಲಿಸಿಕೊಂಡು ಸದಸ್ಯರಿಂದ ವಂಶವೃಕ್ಷ ಓಟಿಪಿ ಪಡೆದು ಕುಟುಂಬದ ಎಲ್ಲ ಸದಸ್ಯರಿಗೆ ಜಂಟಿ ಖಾತೆ ಮಾಡುತ್ತೇವೆ. ಕುಟುಂಬದ ಆಸ್ತಿ ವ್ಯಾಜ್ಯಗಳಿದ್ದರೆ ನಂತರದಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ವಿವರಿಸಿದರು.

ಇ-ಪೌತಿ ಖಾತಾ ಆಂದೋಲನದ ಅಭಿಯಾನದಲ್ಲಿ ಗ್ರಾಮಸ್ಥರುಗಳಿಂದ ಬಂದ ಸಲಹೆ ಸೂಚನೆಗಳನ್ನು ತಹಸೀಲ್ದಾರ್ ಭರತ್ರಾಜ್ ಆಲಿಸಿ ನಮ್ಮ ಇಲಾಖೆಯಲ್ಲಿ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಅಗತ್ಯವಿಲ್ಲ. ಕಛೇರಿಯಲ್ಲಿರುವಾಗ ನೇರವಾಗಿ ಬಂದು ಅಹವಾಲು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದರು.
ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತಹಸೀಲ್ದಾರ್ ಕಛೇರಿಯ ಉಪ ತಹಸೀಲ್ದಾರ್ ಕಟ್ಟೆ ಮಂಜುನಾಥ, ರಿಪ್ಪನ್ಪೇಟೆ ನಾಡಕಛೇರಿಯ ಉಪ ತಹಸೀಲ್ದಾರ್ ಗೌತಮ್, ಗ್ರಾಮಾಡಳಿತಾಧಿಕಾರಿ ಮಂಜುನಾಥ, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





