ಹೊಂಬುಜ ; ಪ್ರಾಚೀನ ಅತಿಶಯ ಶ್ರೀಕ್ಷೇತ್ರ ಹೊಂಬುಜ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವದ ದ್ವಿತೀಯ ದಿನದಂದು ಜಿನಾಗಮೋಕ್ತ ವಿಧಿ-ವಿಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದವು.
ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಿತ್ಯವಿಧಿ ಸಹಿತ ಶ್ರೀಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ, ಕಲಿಕುಂಡ ಯಂತ್ರಾರಾಧನೆ ನಡೆಯಿತು.

ಶ್ರೀಕ್ಷೇತ್ರದ ಶ್ರೀನೇಮಿನಾಥ ಸ್ವಾಮಿ, ಶ್ರೀಆದಿನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಶ್ರೀಕೂಷ್ಮಾಂಡಿನಿ ದೇವಿ, ಶ್ರೀಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜಾ ವಿಧಿಗಳು ಊರ ಪರವೂರ ಭಕ್ತರ ಪಾಲ್ಗೊಳ್ಳುವಿಕೆಯಿಂದ ಜರುಗಿತು.
ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಜಲವನ್ನು ರಜತ ಕಲಶದಲ್ಲಿ ಐಶ್ವರ್ಯ ಗಜರಾಣಿ ಮೇಲಿರಿಸಿ ಶ್ರೀ ಕ್ಷೇತ್ರಕ್ಕೆ ವಾದ್ಯಗೋಷ್ಠಿಯೊಂದಿಗೆ ಶ್ರೀ ಕುಂದಕುಂದ ಗುರುಕುಲ ವಿದ್ಯಾರ್ಥಿಗಳು, ಹುಂಚ ಜೈನ ಸಮಾಜ ಬಾಂಧವರು ಶ್ರೀ ಸನ್ನಿಧಿಗೆ ತರಲಾಯಿತು.
ಸನ್ನಿಧಿಯಲ್ಲಿ ಉತ್ಸವ ನಡೆಯಿತು. ರಾತ್ರಿ ಸಿಂಹವಾಹನೋತ್ಸವವು ಪರಂಪರಾನುಗತ ವೈಭವದೊಂದಿಗೆ ನೆರವೇರಿತು. ಪೂಜಾ ಮತ್ತು ಭೋಜನ ಸೇವಾಕರ್ತರಾಗಿ ಮೀನಾದೇವಿ ರಾರಾ, ಪವನ್ಕುಮಾರ್ ರಾರಾ ಸಹೋದರರು ತೀನ್ಸುಕಿಯಾ, ಅಸ್ಸಾಂ ಶ್ರೀಕ್ಷೇತ್ರಕ್ಕೆ ಆಗಮಿಸಿ ಭಕ್ತಿ ಸಮರ್ಪಣೆ ಮಾಡಿದರು.
ಪುರೋಹಿತರಾದ ಶ್ರೀ ಪದ್ಮರಾಜ ಇಂದ್ರ ಹಾಗೂ ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಶ್ರೀಕ್ಷೇತ್ರವು ವಿದ್ಯುತ್ ದೀಪಗಳಿಂದ ವರ್ಣರಂಜಿತ ಆಕರ್ಷಣೆಯೊಂದಿಗೆ ಭಕ್ತರ ಕಣ್ಮನ ಸೆಳೆಯುತ್ತಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





