ಹೊಸನಗರ : ಮಲೆನಾಡು ಹಾಗೂ ಕರಾವಳಿ ರೈಲು ಸಂಪರ್ಕಕ್ಕೆ ಹೊಸ ಡಿಪಿಆರ್ ತಯಾರಿಸಿ, ನೂತನ ರೈಲು ಸಂಚಾರ ನಕಾಶೆಗೆ ಮುಂದಾಗಿ ಎಂದು ಕೇಂದ್ರ ಹಿತರಕ್ಷಣಾ ವೇದಿಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ನೂತನ ರೈಲು ಮಾರ್ಗವು ಹೊಸನಗರ ಪಟ್ಟಣದ ಮೂಲಕ ಹಾದು ಹೋಗುವಂತೆ ಹೊಸ ಡಿಪಿಆರ್ ತಯಾರಿಸಬೇಕು. ಕಾರಣ ಹೊಸನಗರ ತಾಲೂಕು ವಿವಿಧ ಜಲಾಶಯಗಳ ನಿರ್ಮಾಣಕ್ಕಾಗಿ ಸಾವಿರಾರು ಎಕರೆ ರೈತರ ಜಮೀನು ಆಪೋಷನವಾಗಿದೆ. ಜನತೆ ಸಾವಿರಾರು ಸಂಖ್ಯೆಯಲ್ಲಿ ಹಿನ್ನೀರ ಭೂ ಪ್ರದೇಶ ತೊರೆದಿದ್ದರೂ ಈವರೆಗೆ ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗದೆ ಹಲವು ದಶಕಗಳೇ ಸಂದಿವೆ. ಆ ಕಾರಣಕ್ಕೆ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾದ ನೊಂದ ಜನತೆಗೆ ಇನ್ನು ಮುಂದಾದರೂ ಸರಕಾರದ ಯಾವುದೇ ಜನಪರ ಯೋಜನೆಗಳ ಅನುಷ್ಟಾನದಲ್ಲಿ ಮೊದಲ ಆದ್ಯತೆ ನೀಡಬೇಕು ಎಂಬುದು ವೇದಿಕೆ ಆಗ್ರಹವಾಗಿದೆ ಎಂದು ಶ್ರೀಸಾಮಾನ್ಯ ವೇದಿಕೆಯ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಅವರು ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಕಳೆದ ಏಳೆಂಟು ದಶಕಗಳ ಹಿಂದೆಯೇ ಹೊಸನಗರಕ್ಕೆ ರೈಲು ಸಂಪರ್ಕ ಮಾರ್ಗದ ನಕ್ಷೆ ತಯಾರಿ ನಡೆದಿತ್ತು. ಆದರೆ, ಆ ದಿನಗಳಲ್ಲಿ ರೈಲು ಮಾರ್ಗ ಇರುವ ಕಡೆಯೆಲ್ಲ ಕಳ್ಳಕಾಕರ ಹಾವಳಿ ಮತ್ತು ರಜಾಕಾರರ ಹಾವಳಿ ಜಾಸ್ತಿಯಾಗಿತ್ತು. ಇದನ್ನು ಅರಿತ ಅಂದಿನ ಮಲೆನಾಡಿನ ಮುಖಂಡರು ತಮ್ಮ ಊರಿಗೆ ರೈಲು ಮಾರ್ಗ ಬೇಡ ಎಂದು ವಿರೋಧಿಸಿ ರಿಪ್ಪನ್ಪೇಟೆಯ ಹತ್ತಿರದ ಅರಸಾಳುವರೆಗೆ ಬಂದ ಮಾರ್ಗವನ್ನು ವಾಪಾಸು ತಿರುಗಿಸಿ ಕಂಸಿ ಕಡೆ ಹೋಗುವಂತೆ ಮಾಡಿದ್ದು ಈಗ ಇತಿಹಾಸ. ಹೊಸನಗರಕ್ಕೆ ಅಂದಿನ ಕಳ್ಳಕಾಕರ ಭಯ ಆಪತ್ತು ಬರದಂತೆ ರಕ್ಷಿಸಿದ್ದು ಈಗ ಇತಿಹಾಸ. ಅಲ್ಲದೆ, ಅಂದಿನ ಬ್ರಿಟಿಷ್ ಗೌರ್ಮೆಂಟ್ ಹೊಸನಗರಕ್ಕೆ ರೈಲು ಮಾರ್ಗ ಮಾಡಿದ್ದರೆ ಇಲ್ಲಿನ ಪ್ರಕೃತಿ ಸಂಪತ್ತು ಮತ್ತು ಅಪೂರ್ವ ಖನಿಜಗಳನ್ನು ಬಹುವಾಗಿ ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ ಎಂಬ ಕಾರಣ ನೀಡಲಾಗಿತ್ತು. ಆದರೆ,ಈಗ ಕಾಲ ಬದಲಾಗಿದೆ. ಪ್ರಜಾಪ್ರಭುತ್ವವಿದೆ. ಎಲ್ಲರ ಕಲ್ಯಾಣ ಮತ್ತು ರಕ್ಷಣೆಗೆ ವ್ಯವಸ್ಥೆಗಳಿವೆ. ಈ ಹಿನ್ನೆಲೆಯಲ್ಲಿ ಈಗ ರೈಲು ಮಾರ್ಗ ಹಾನಿಯ ಕಾರಣೀಭೂತವಾಗಿಲ್ಲ. ಬದಲಿಗೆ ಪ್ರಗತಿಯ ಹರಿಕಾರ ಆಗಿ ನಿಂತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಹಾಗೂ ಸರ್ಕಾರಗಳು ಈ ಬಗ್ಗೆ ತುಂಬಾ ಗಂಭೀರವಾದ ಕ್ರಮ ಕೈಗೊಂಡು ಶಿವಮೊಗ್ಗದಿಂದ ಶೃಂಗೇರಿ ಮತ್ತು ಶಿವಮೊಗ್ಗದಿಂದ ಭಟ್ಕಳಕ್ಕೆ ಹೊಸನಗರ ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣ ಮಾಡಬೇಕೆಂದು ವೇದಿಕೆಯ ಪರವಾಗಿ ಆಗ್ರಹಿಸಿದ್ದಾರೆ.
ಈ ವೇಳೆ ವೇದಿಕೆಯ ಸಂಚಾಲಕ ವಾಸಪ್ಪ ಮಾಸ್ತಿಕಟ್ಟೆ, ನೇರಳೆ ಸ್ವಾಮಿ, ಕುಮಾರ ಮಂಡಾನಿ, ಬಾಳೆಕೊಪ್ಪ ನಾಗಪ್ಪ, ಶ್ರೀಧರ ಎಂ.ಗುಡ್ಡೇಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





