ರಿಪ್ಪನ್ಪೇಟೆ ; ಹೊಸನಗರ-ಶಿವಮೊಗ್ಗ-ಸಾಗರ-ತೀರ್ಥಹಳ್ಳಿ ನಾಲ್ಕು ಮುಖ್ಯ ರಸ್ತೆಯ ಸಂಪರ್ಕದ ವಿನಾಯಕ ವೃತ್ತದಲ್ಲಿ 75 ಅಡಿ ಸುತ್ತಳತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ನಾಲ್ಕು ಸಂಪರ್ಕದ ರಸ್ತೆ ವಿಭಜಕದ ಎರಡು ಸೈಡ್ನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಹಾಗೂ ನಾಲ್ಕು ಚಕ್ರದ ವಾಹನಗಳು 100 ಮೀಟರ್ ಅಂತರದಲ್ಲಿ ನಿಲುಗಡೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೊಸನಗರ ವೃತ್ತ ನಿರೀಕ್ಷಕ (ಸಿಪಿಐ) ಎಂ.ಎಸ್. ಗೌಡಪ್ಪ ಗೌಡರ್ ತಿಳಿಸಿದರು.
ಇಂದು ಪಟ್ಟಣದ ಸ್ಥಳೀಯ ಗ್ರಾಮ ಪಂಚಾಯಿತ್ ಸಭಾಂಗಣದಲ್ಲಿ ವರ್ತಕರ ಮತ್ತು ಸಾರ್ವಜನಿಕರ ಸಮಲೋಚನಾ ಸಭೆಯಲ್ಲಿ ಭಾಗವಹಿಸಿ, ವರ್ತಕರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ನಂತರ ಸಂಚಾರಿ ನಿಯಮದಂತೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಹಾಗೂ ತಮ್ಮಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಗೊಳಿಸಲು ಒಂದು ತಿಂಗಳ ಕಾಲ ನಮ್ಮ ಸಿಬ್ಬಂದಿಗಳನ್ನು ನೇಮಿಸಲಾಗುವುದು ನಂತರ ತಾವು ಲೋಕೋಪಯೋಗಿ ಇಲಾಖೆಯವರು ಬಿಳಿ ಬಣ್ಣದ ಗುರುತು ಹಾಕಿದ ಮೇಲೆ ವೃತ್ತದ ಸುತ್ತಮುತ್ತ ಬಸ್ ಪ್ರಯಾಣಿಕರು ಹತ್ತಿ ಇಳಿಯಲು ಮಾತ್ರ ಅವಕಾಶ ಉಳಿದಂತೆ ಓಡಾಡುವ ವಾಹನಗಳ ದಟ್ಟಣೆಯ ಕಾರಣ ನಾಲ್ಕು ಚಕ್ರದ ವಾಹನಗಳನ್ನು ಪ್ರತ್ಯೇಕವಾಗಿ 100 ಮೀಟರ್ ಅಂತರದಲ್ಲಿ ನಿಲ್ಲಿಸುವುದು ಹಾಗೂ ದ್ವಿಚಕ್ರವಾಹನಗಳನ್ನು ಡಿವೈಡರ್ನ ಎರಡು ಬದಿಯಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಲಾಗುವುದು. ವಾಹನ ಸವಾರರು ಅಡ್ಡದಿಡ್ಡಿಯಾಗಿ ನಿಲ್ಲಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಸಾರಿಗೆ ನಿಯಮದಡಿ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.

ವರ್ತಕರ ಪರವಾಗಿ ಎಂ.ಸುರೇಶ್ಸಿಂಗ್, ಸುಂದರೇಶ್, ಕೆ.ಬಿ.ನಾಗಭೂಷಣ, ಹೆಚ್.ಎಸ್.ಸತೀಶ್, ಡಿ.ಸುರೇಶಪ್ರಭು, ಸೋಮಶೇಖರ ಮಾತನಾಡಿ, ಸಾಗರ ರಸ್ತೆಯಲ್ಲಿ ವಿಸ್ತರಣೆಯ ಕಾರ್ಯದಲ್ಲಿ ಸಾಕಷ್ಟು ಲೋಪ ಕಂಡುಬಂದಿದೆ. ಎಲ್ಲರಿಗೂ ನಿಯಮ ಪಾಲಿಸಬೇಕಾದ ಆಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಗಮನಸೆಳೆದರು.
ಸಾರ್ವಜನಿಕವಾಗಿ ಸುಧೀಂದ್ರ ಪೂಜಾರಿ, ಎಂ.ಬಿ.ಮಂಜುನಾಥ, ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ, ಡಿ.ಈ.ಮಧುಸೂದನ್, ಉಬೇದುಲ್ಲಾ ಷರೀಫ್ ಮಾತನಾಡಿ, ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಇಲಾಖೆಯ ನಿಯಮದಂತೆ ಅನುಸರಿಸಬೇಕಾದ ಕ್ರಮದ ಕುರಿತು ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ತಮ್ಮ ನಿಯಮದಡಿ ಕೈಗೊಳ್ಳುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ಹೋಂ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಲಹೆ ನೀಡಿದರು.
ಸಮಾಲೋಚನಾ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಸುನೀಲ್, ಪಿಎಸ್ಐ ರಾಜುರೆಡ್ಡಿ, ಪ್ರೋಬೆಷನರಿ ಪಿ.ಎಸ್.ಐ.ಶ್ರೀಕಾಂತ್ ಹಾಗೂ ಪಂಚಾಯಿತ್ ಸಿಬ್ಬಂದಿವರ್ಗ ಹಾಜರಿದ್ದರು. ಪಿ.ಎಸ್.ಐ.ರಾಜುರೆಡ್ಡಿ ಸ್ವಾಗತಿಸಿದರು. ಉಮೇಶ್ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





