ಹೊಸನಗರ : ಯಾರೇ ಆಗಲಿ ಒಬ್ಬರ ಕೈಯಲ್ಲಿ ಆಗದ ಕೆಲಸವನ್ನು ಅದೇ ಸಂಘ-ಸಂಘಟನೆಯ ಮೂಲಕ ಹೋರಾಟ ನಡೆಸಿದರೆ ಜಯ ಖಚಿತ ಹಾಗೂ ಸರ್ಕಾರದ ಸವಲತ್ತು ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಹೊಸನಗರ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಬಾಳೆಕೊಪ್ಪ ನಾಗಪ್ಪ ಹೇಳಿದರು.
ಶಿವಮೊಗ್ಗದ ನೌಕರರ ಭವನದ ಆವರಣದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲ್ಲೂಕುಗಳ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ಸುಮಾರು 15-20 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸರ್ಕಾರದ ಅಣತಿಯಂತೆ ಸೇವೆ ಸಲ್ಲಿಸುತ್ತಿದ್ದೇವೆ. ಗ್ರಾಮ ಸಹಾಯಕರ ಹಿತಾಸಕ್ತಿ, ಸೇವಾ ಭದ್ರತೆ, ಉದ್ಯೋಗ ಖಾತರಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರದ ಮುಂದೆ ಹೋಗಿದ್ದೇವೆ. ಆದರೆ ಆ ಬೇಡಿಕೆಗಳು ಮರೀಚಿಕೆಯಾಗಿ ಉಳಿದಿದೆ. ನಮ್ಮ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ನಾವೆಲ್ಲರೂ ಸಂಘಟಿತರಾಗಿ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಇಟ್ಟುಕೊಂಡು ಹೋಗೋಣ. ಅಷ್ಟು ಬೇಡಿಕೆಯಲ್ಲದಿದ್ದರೂ ಅಲ್ಪ-ಸ್ವಲ್ಪ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಮೊದಲು ಸಂಘ-ಸಂಘಟನೆಯನ್ನು ಬಲಪಡಿಸಿಕೊಳ್ಳೋಣ ಎಂದರು.

ಈ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಬಾಳೆಕೊಪ್ಪ ನಾಗಪ್ಪನವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದ್ದು ಸಂಘ ಎಲ್ಲಾ ಚಟುವಟಿಕೆಗಳ ಮಹಾ ಪೋಷಕರಾಗಿ ರಾಮು ಭದ್ರಾವತಿ ಹಾಗೂ ನಾಗಪ್ಪ ಬಾಳೆಕೊಪ್ಪನವರನ್ನು ಆಯ್ಕೆ ಮಾಡಲಾಗಿದ್ದು ಉಪಾಧ್ಯಕ್ಷರಾಗಿ ಭದ್ರಾವತಿಯ ಚಂದ್ರಪ್ಪ, ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಸಾಗರದ ಆನಂದ್ ಹೆಚ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ತೀರ್ಥಹಳ್ಳಿಯ ಚರಣ್ ಎ.ಎಲ್, ಕಾರ್ಯದರ್ಶಿಯಾಗಿ ಭದ್ರಾವತಿಯ ರವೀಂದ್ರ, ಖಜಾಂಚಿಯಾಗಿ ಹೊಸನಗರದ ಅಶೋಕ್, ಸಂಘಟನಾ ಕಾರ್ಯದರ್ಶಿಗಳಾಗಿ ಜಗನ್ನಾಥ್ ಸಾಗರ, ಅರುಣ್ ಕುಮಾರ್ ಸೊರಬ, ಸಾಂಸ್ಕೃತಿಕ ಸದಸ್ಯರಾಗಿ ಮಹಾದೇವ ಭದ್ರಾವತಿ, ಕ್ರೀಡಾ ಸದಸ್ಯರಾಗಿ ಸುಧೀರ್ ತೀರ್ಥಹಳ್ಳಿ, ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





