ಹೊಸನಗರ

ಕ್ಷೀಣಿಸಿದ ಮಳೆ ; ಚುರುಕುಗೊಂಡ ಭತ್ತದ ನಾಟಿ ಕಾರ್ಯ

ರಿಪ್ಪನ್‌ಪೇಟೆ : ಮಲೆನಾಡಿನ ನಡುಮನೆ ಎಂದೇ ಖ್ಯಾತಿ ಹೊಂದಿರುವ ಹೊಸನಗರ ತಾಲೂಕಿನಾದ್ಯಂತ ಕಳೆದ ಎರಡು ದಿನಗಳ ಕಾಲ ಉತ್ತಮ ಮಳೆಯಾಗಿದ್ದು ನಿನ್ನೆಯಿಂದ ಮಳೆ ಕ್ಷೀಣಿಸಿದ್ದು ಭತ್ತದ ನಾಟಿ ಕಾರ್ಯವನ್ನು ರಿಪ್ಪನ್‌ಪೇಟೆ ಭಾಗದ ರೈತಾಪಿ ವರ್ಗ ಚುರುಕುಗೊಳಿಸಿದ್ದಾರೆ.

ಕಳೆದ ಎರಡು ದಿನಗಳ ಕಾಲ ಆರ್ಭಟಿಸಿದ ಮುಂಗಾರು ಮಳೆ ಈಗ ಬಿಡುವು ನೀಡುವುರೊಂದಿಗೆ ಕೃಷಿ ಕಾರ್ಯಕ್ಕೆ ಚುರುಕು ಮುಟ್ಟಿಸಿದೆ. ಮಲೆನಾಡಿನ ವ್ಯಾಪ್ತಿಯಲ್ಲಿ ಸರಿಯಾಗಿ ಮಳೆ ಸುರಿಯದ ಕಾರಣ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಸರಿಯಾಗಿ ಹರಿಯದೆ, ತುಂಬಿಕೊಳ್ಳದೆ ಇದ್ದು ಮುಂದೆ ಹೇಗೆ ಎಂಬ ಜಿಜ್ಞಾಸೆಯಲ್ಲಿ ರೈತಾಪಿ ವರ್ಗ ಚಿಂತಿಸುವಂತಾಗಿದೆ.

ಈಗಾಗಲೇ ವರದಿಯಾಗಿರುವಂತೆ ಹೊಸನಗರ ತಾಲ್ಲೂಕಿನ 149.40 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿರುವ ಬೆನ್ನಲ್ಲೇ ತಾಲ್ಲೂಕಿನ ನಗರದಲ್ಲಿ 261.0 ಮಿ.ಮೀ., ಅಂಡಗದೋದೂರು 260.5 ಮಿ.ಮೀ. ಯಡೂರು 239.5, ಕರಿಮನೆ 238.5 ಮಿ.ಮೀ.ಹೀಗೆ ಮಳೆ ಮಾಪಕದಲ್ಲಿ ಸುರಿದ ಮಳೆಯ ಪ್ರಮಾಣ ದಾಖಲಾಗಿದ್ದರೆ ತಾಲ್ಲೂಕಿನ ಕೆರೆಹಳ್ಳಿ, ಹುಂಚ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ವಾಡಿಕೆ ಮಳೆಗಿಂದ ಭಾರಿ ಕಡಿಮೆ ಮಳೆಯಾಗಿದೆ.

ಒಟ್ಟಾರೆಯಾಗಿ ಮಧ್ಯ ಮಲೆನಾಡಿನಲ್ಲಿ ಈ ರೀತಿ ಮಳೆ ಕ್ಷೀಣಿದರೆ ಮುಂದಿನ ವರ್ಷದಲ್ಲಿ ಕುಡಿಯುವ ನೀರಿಗೂ, ತಿನ್ನುವ ಅನ್ನಕ್ಕೂ ಕೊರತೆ ಎದುರಾಗುವ ಕಾಲ ದೂರವಿಲ್ಲ ಎಂದು ರೈತ ಮುಖಂಡ ಆರ್.ಎನ್.ಮಂಜುನಾಥ, ಕುಕ್ಕಳಲೇ ಈಶ್ವರಪ್ಪಗೌಡ ತೀವ್ರ ಕಳವಳ ವ್ಯಕ್ತಪಡಿಸಿ ಸರ್ಕಾರ ಈ ಕೂಡಲೇ ಹೊಸನಗರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಸರ್ಕಾರ ಈ ಮೇಲ್ಕಂಡ ನಗರ ಹೋಬಳಿ ವ್ಯಾಪ್ತಿಯ ಮಳೆ ಮಾಪನದ ವರದಿಯನ್ನಾದರಿಸಿ ವರದಿ ನೀಡದೆ ಹೊಸನಗರ ತಾಲ್ಲೂಕಿನ ಕಸಬಾ, ಹುಂಚ ಹಾಗೂ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಮಳೆಮಾಪನಗಳಲ್ಲಿ ವರದಿಯ ಬಗ್ಗೆ ಸಮಗ್ರವಾಗಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯದರ್ಶಿಗಳು ವರದಿ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Comment