ಗ್ರಾಮೀಣ ಕ್ರೀಡೆ ‘ಕೆರೆ ಬೇಟೆ’ ಮೀನು ಶಿಕಾರಿಯಲ್ಲಿ ಸಂಭ್ರಮಿಸಿದ ಮಲೆನಾಡಿಗರು
ಸೊರಬ: ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆರೆಬೇಟೆಯು ಚಂದ್ರಗುತ್ತಿ ಗ್ರಾಮದ ಮಲ್ಲೇಕೆರೆಯಲ್ಲಿ ಭಾನುವಾರ ನೂರಾರು ಮೀನು ಪ್ರಿಯರ ಪಾಲ್ಗೊಳ್ಳುವಿಕೆಯ ಜೊತೆಗೆ ಸಂಭ್ರಮದಿಂದ ನಡೆಯಿತು.
ಚಂದ್ರಗುತ್ತಿ ಸೇರಿದಂತೆ ಜೋಳದಗುಡ್ಡೆ, ಚಿಕ್ಕಮಾಕೊಪ್ಪ, ಯಡಗೊಪ್ಪ, ಚನ್ನಪಟ್ಟಣ, ಬೆನ್ನೂರು, ಹರೀಶಿ, ಗುಡುವಿ, ಅಂದವಳ್ಳಿ, ತಾಲೂಕಿನ ವಿವಿಧ ಭಾಗಗಳಿಂದ ಮೀನು ಪ್ರಿಯರು ಗ್ರಾಮೀಣ ಕ್ರೀಡೆ ಕೆರೆ ಬೇಟೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಮನರಂಜನೆ ಪಡೆದುಕೊಂಡರು.
ಚಂದ್ರಗುತ್ತಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಕೆರೆಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿಯವರು ಮೀನು ಸಾಕಾಣಿಕೆ ಉದ್ದೇಶದಿಂದ 2 ವರ್ಷದ ಅವಧಿಗೆ ಕೆರೆ ಹರಾಜು ಪ್ರಕ್ರಿಯೆ ಮಾಡಲಾಗಿತ್ತು. ಅದರಂತೆ ಗುತ್ತಿಗೆದಾರರು ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಟ್ಟು ಸಾಕಿ ಬೇಸಿಗೆ ಸಂದರ್ಭ ಕೆರೆಯ ನೀರು ಕಡಿಮೆಯಾದ ಸಮಯದಲ್ಲಿ ಕೆರೆ ಬೇಟೆ ಮಾಡಲು ನಿರೀಕ್ಷಿಸಿ ಒಂದು ಕೂಣಿಗೆ 300 ರೂ. ಗಳಂತೆ ದರ ನಿಗದಿಪಡಿಸಲಾಗಿತ್ತು.
ಮಲೆನಾಡಿನ ಜನರ ಸೊಗಡಾದ ಕೆರೆ ಬೇಟೆಯಲ್ಲಿ ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆಯನ್ನು ಮಾಡಿದ ಗ್ರಾಮಸ್ಥರು ಸುಮಾರು 4 ರಿಂದ 5 ಕೆ.ಜಿ ತೂಕವುಳ್ಳ ಮೀನುಗಳನ್ನು ಶಿಕಾರಿ ಮಾಡುವುದರ ಮೂಲಕ ಕೆರೇಬೇಟೆಯಲ್ಲಿ ಸಂಭ್ರಮಿಸಿದರು.
ಇನ್ನು ಕೆರೆ ಬೇಟೆ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಪಾಲ್ಗೊಂಡಿದ್ದರು. ಯಶಸ್ವಿ ಕೆರೆಬೇಟೆಯಲ್ಲಿ ಗುತ್ತಿಗೆದಾರರು ಮತ್ತು ಗ್ರಾಮಸ್ಥರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.