ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು ; ರಂಭಾಪುರಿ ಶ್ರೀಗಳು

0 43

ಸೊರಬ : ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಮನುಷ್ಯನಿಗೆ ಮಾನಸಿಕ ಶಾಂತಿ ಸಂತೃಪ್ತಿ ಇಲ್ಲದಂತಾಗಿದೆ. ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಭಾನುವಾರ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬೆಲೆಯುಳ್ಳ ಬದುಕಿಗೆ ಸಂಸ್ಕಾರ ಮುಖ್ಯ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ಕರ್ತವ್ಯ, ಶಿಸ್ತು, ಶ್ರದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನದ ಅರಿವು ಮುಖ್ಯವೆಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಅಂಗ ಅವಗುಣ ದೂರ ಮಾಡಿ ಲಿಂಗ ಗುಣ ಬೆಳೆಸಲು ವೀರಶೈವ ಧರ್ಮ ಸದಾ ಶ್ರಮಿಸಿದೆ. ಜ್ಞಾನ ಕ್ರಿಯಾತ್ಮಕವಾದ ಬದುಕಿನೊಂದಿಗೆ ಸಾಮಾಜಿಕ ಚಿಂತನೆಗೈದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಪುರ ಸಂಸ್ಥಾನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಭಕ್ತರ ಸಹಕಾರದಿಂದ ಪ್ರತಿ ವರುಷ ಜಯಂತ್ಯುತ್ಸವ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಮಾಜಿ ಜಿ.ಪಂ.ಸದಸ್ಯ ಗಿರೀಶ ಸಮಾರಂಭವನ್ನು ಉದ್ಘಾಟಿಸಿದರು. ಪವಿತ್ರ ಸಮಾರಂಭದಲ್ಲಿ ಮಳಲಿ ಮಠದ ಡಾ.ನಾಗಭೂಷಣ ಶ್ರೀಗಳು, ಜಡೆ ಡಾ.ಮಹಾಂತ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಕುರುವತ್ತಿ ನಂದೀಶ್ವರ ಶ್ರೀಗಳು, ಲಕ್ಕವಳ್ಳಿ ಜೈನ ಮಠದ ಶ್ರೀಗಳು, ತಿರುಮಲಕೊಪ್ಪದ ದಾನ್ಯ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ನೇತೃತ್ವ ವಹಿಸಿದ ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಸ್ಕಾರ ಸಂಸ್ಕೃತಿ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ. ಅರಿವುಳ್ಳ ಜನ್ಮದಲ್ಲಿ ಬಂದು ಗುರು ಕಾರುಣ್ಯ ಪಡೆದು ಬಾಳಲು ಶ್ರಮಿಸಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತೋರುತ್ತವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬನ್ನಿಕೊಪ್ಪದ ಡಾ|| ಸುಜ್ಞಾನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವ ಜೀವನಕ್ಕೆ ಧರ್ಮ ದಿಕ್ಸೂಚಿ. ಜೀವನದಲ್ಲಿ ಗುರಿ ಮತ್ತು ಗುರು ಆಶ್ರಯಿಸಿ ಬದುಕಿನಲ್ಲಿ ಶ್ರೇಯಸ್ಸು ಕಾಣಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಎಲ್ಲರ ಬಾಳಿನಲ್ಲಿ ಸ್ಫೂರ್ತಿ ತರುತ್ತವೆ ಎಂದರು.

ಸಾಗರದ ಪಂಚಾಕ್ಷರಯ್ಯನವರು ವೀರಶೈವ ಧರ್ಮದ ಹಿರಿಮೆ ಮತ್ತು ಗುರು ಮಹಿಮೆ ಕುರಿತು ಉಪನ್ಯಾಸವನ್ನಿತ್ತರು. ಸದಾನಂದಗೌಡ್ರು ಬಳಗಲಿ, ಜಡೆ ಕೆ.ಬಂಗಾರಪ್ಪಗೌಡ್ರು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾಳಂಗಿ ಮತ್ತು ಅಗಸನಹಳ್ಳಿ ಭಜನಾ ಮಂಡಳಿಯಿಂದ ಪ್ರಾರ್ಥನಾ ಗೀತೆ ಜರುಗಿತು. ಬಂಕವಳ್ಳಿ ಬಿ.ವೀರೇಂದ್ರಗೌಡ ನಿರೂಪಿಸಿದರು. ಕುಬಟೂರಿನ ಗಿರೀಶ ಸಹೋದರರು ಪ್ರಸಾದ ಸೇವೆ ಸಲ್ಲಿಸಿದರು.

Leave A Reply

Your email address will not be published.

error: Content is protected !!