ಜೀವಭಯದಲ್ಲಿ ಕಛೇರಿ ಸಿಬ್ಬಂದಿ ವರ್ಗ ; ಕಳಚಿ ಬೀಳುವ ದುಸ್ಥಿತಿಯಲ್ಲಿ ರಿಪ್ಪನ್ಪೇಟೆ ನಾಡಕಛೇರಿ ಮೇಲ್ಛಾವಣಿ !!
ರಿಪ್ಪನ್ಪೇಟೆ: ಜಿಲ್ಲಾಧಿಕಾರಿಗಳೇ ತಾವೂ ಕಳಚಿ ಬೀಳುವ ಸ್ಥಿತಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ರಿಪ್ಪನ್ಪೇಟೆ ನಾಡಕಛೇರಿ ಕಟ್ಟಡವನ್ನು ಒಮ್ಮೆಯಾದರೂ ನೋಡಿ ತಮ್ಮ ಸಿಬ್ಬಂದಿಗಳ ಮತ್ತು ರೈತನಾಗರೀಕರ ಭಯವನ್ನು ದೂರ ಮಾಡಿ ಸಾಹೇಬ್ರೇ…..
ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಕಟ್ಟಡದಲ್ಲಿ ಹೋಬಳಿ ಕಛೇರಿ ಪ್ರಾರಂಭಿಸಲಾಗಿದ್ದು ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮೇಲ್ಛಾವಣಿ ಯಾವ ಸಂದರ್ಭದಲ್ಲಿ ಸಿಬ್ಬಂದಿಗಳ ಮತ್ತು ರೈತ ನಾಗರೀಕರ ತಲೆ ಮೇಲೆ ಬೀಳುತ್ತದೋ ಎಂಬ ಜೀವ ಭಯದಲ್ಲಿ ನೌಕರವರ್ಗ ಕಾಲಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಮಲೆನಾಡಿನಲ್ಲಿ ಮಳೆಗಾಲ ಆರಂಭವಾಗಿಲ್ಲ ಹಾಗೂ ಈಗಾಗಲೇ ಕರಾವಳಿ ವ್ಯಾಪ್ತಿಯಲ್ಲಿ ಚಂಡಮಾರುತದ ಮಳೆ ಆರಂಭವಾಗಿದ್ದು ಯಾವುದೇ ಸಂದರ್ಭದಲ್ಲಿಯೂ ಜಿಲ್ಲೆಯನ್ನು ಪ್ರವೇಶಿಸುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು ಈ ಚಂಡಮಾರುತದ ಗಾಳಿಯಿಂದಾಗಿ ಇಲ್ಲಿನ ದುಸ್ಥಿತಿಯಲ್ಲಿರುವ ಹೋಬಳಿ ಕಛೇರಿಯ ಮೇಲ್ಛಾವಣಿ ಕಳಚಿ ಬೀಳುವುದೋ ಎಂಬ ಭಯದಲ್ಲಿ ನೌಕರವರ್ಗ ಕರ್ತವ್ಯ ನಿರ್ವಹಿಸುವಂತಾಗಿದೆ.
ಒಟ್ಟಾರೆಯಾಗಿ ಅಪಾಯದ ಸ್ಥಿತಿಯಲ್ಲಿರುವ ಈ ನಾಡಕಛೇರಿಯ ಮೇಲ್ಛಾವಣಿಯನ್ನು ತಕ್ಷಣ ದುರಸ್ಥಿಗೊಳಿಸಿ ಇಲ್ಲವೇ ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತು ನಾಡಕಛೇರಿಯನ್ನು ಸ್ಥಳಾಂತರಗೊಳಿಸಿ ಎಂದು ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮತ್ತು ಜನಪರ ಹೋರಾಟಗಾರ ಆರ್.ಎನ್.ಮಂಜುನಾಥ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ ಹಾಗೂ ಕುಕ್ಕಳಲೇ ಈಶ್ವರಪ್ಪ, ಮುಡುಬ ಧರ್ಮಪ್ಪ ಆಗ್ರಹಿಸಿದ್ದಾರೆ.