ಹೊಸನಗರ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ | ಕಣ್ಣಿದ್ದು ಕುರುಡರಂತೆ ವರ್ತಿಸುವ ಅಧಿಕಾರಿಗಳು ; ಗಿರೀಶ್ ಆಚಾರ್ ಗಂಭೀರ ಆರೋಪ, ಡಿಸಿಗೆ ದೂರು

0 115


ಹೊಸನಗರ: ತಾಲ್ಲೂಕಿನ ಬಾಳೆಕೊಪ್ಪ ಮತ್ತು ಹೆಚ್ ಹೊನ್ನೆಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಸುಮಾರು 500 ಲೋಡ್ ಮರಳು ಸ್ಟಕ್ ಮಾಡಿರುವುದಲ್ಲದೇ ಸುಮಾರು ಒಂದು ತಿಂಗಳಿಂದ ಜೆಸಿಬಿ ಮತ್ತು ಹಿಟಾಚಿ ಯಂತ್ರದ ಮೂಲಕ ಬೆಳಿಗ್ಗೆಯಿಂದ ರಾತ್ರಿಯಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದರೂ ಯಾವುದೇ ಅಧಿಕಾರಿಗಳು ಕಂಡು ಕಾಣದವರಂತೆ ಇದ್ದಾರೆ. ಒಂದೆರಡು ದಿನದಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಿಸದಿದ್ದರೇ ಆಧಾರ ಸಹಿತ ನ್ಯಾಯಾಲಯದ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಜನ ಸಂಗ್ರಾಮ ಪರಿಷತ್ ಜಿಲ್ಲಾ ಸಂಚಾಲಕರಾದ ಗಿರೀಶ್ ಆಚಾರ್ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.


ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನ ಕೆಲವು ಹೊಳೆ ಬಾಗಿಲಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ರಾತ್ರಿ ವೇಳೆಯಲ್ಲಿ ಸುಮಾರು ನೂರು ಟಿಪ್ಪರ್‌ನಷ್ಟು ಅಕ್ರಮ ಮರಳುಗಾರಿಕೆ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳ ವರ್ಗ ಕಣ್ಣಿಗೆ ಕಾಣದಂತೆ ಅಕ್ರಮ ದಂಧೆ ನಡೆಸುವವರಿಗೆ ಬೆಂಗಾವಲಾಗಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಯಾರ ಭಯವೂ ಇಲ್ಲದಂತಾಗಿದೆ ಎಂದರು.


ಎರಡು ತಿಂಗಳ ಹಿಂದೆ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ನಾವು ಶಾಸಕ ಹರತಾಳು ಹಾಲಪ್ಪನವರು ಬೆಂಬಲಿಗರೆಂದು ಹೇಳಿಕೊಂಡು ಅಕ್ರಮ ಮರಳುಗಾರಿಕೆ ನಡೆಸುವುದರ ಜೊತೆಗೆ ಮಾಜಿ ಶಾಸಕರಾದ ಹರತಾಳು ಹಾಲಪ್ಪನವರನ್ನು ಸೋಲಿಸುವ ಮಟ್ಟಕ್ಕೆ ಹೋದವರು ಈಗ ನಾವು ಶಾಸಕ ಬೇಳೂರು ಗೋಪಾಲಕೃಷ್ಣರವರ ಅಭಿಮಾನಿ ಎಂದು ಹೇಳಿಕೊಂಡು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ‌. ಇವರು ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ಮಸಿ ಬಳಿಯುವ ಹಂತಕ್ಕೆ ತಲುಪಿದ್ದು ಅಧಿಕಾರಿಗಳು ಯಾರಿಗೂ ತಲೆ ತಗ್ಗಿಸದೇ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ಹೊಸನಗರದಲ್ಲಿ ಅಕ್ರಮ ಮರಳುಗಾರಿಕೆ ತಡೆ ಮಾಡಬಹುದೆಂದರು.

Leave A Reply

Your email address will not be published.

error: Content is protected !!