ಹೊಸನಗರ ; ಜಾತ್ರೆ, ಧಾರ್ಮಿಕ ಮಹೋತ್ಸವಗಳು ನಮ್ಮ ಸನಾತನ ಸಂಸ್ಸೃತಿಯ ಜೀವಂತಿಕೆಯ ಸಂಕೇತವಾಗಿದೆ. ಪರಸ್ಪರ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ತೊರೆದು ಎಲ್ಲರೂ ಒಗ್ಗೂಡಿ ಆಚರಿಸಲು ಮುಂದಾಗಬೇಕು ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ, ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಫೆ.4ರಿಂದ 12ರ ವರೆಗೆ ಪಟ್ಟಣದಲ್ಲಿ ನಡೆಯುವ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾತ್ರೆ ಆಚರಣಾ ಸಮಿತಿ ಈ ಬಾರಿಯೂ ವಿವಿಧ ಮನೋರಂಜನಾ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಲಾ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಸಂಗತಿಯಾಗಿದೆ. ಸಮಿತಿಯ ಕೋರಿಕೆ ಮೇರೆಗೆ ಕ್ಷೇತ್ರದ ಶಾಸಕನಾಗಿ ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗಾಗಿ ರೂ 10 ಲಕ್ಷ ಅನುದಾನ ಮೀಸಲಿಟ್ಟಿದ್ದೇನೆ. ಮುಂಬರುವ ದಿನಗಳಲ್ಲಿ ಜಾತ್ರಾ ಸಮಿತಿಯಿಂದ ಶಾಲೆ, ಹಾಸ್ಟೆಲ್, ವಿವಾಹ ಕಾರ್ಯಗಳಿಗಾಗಿ ಸಭಾ ಭವನ ಸೇರಿದಂತೆ ವಿವಿಧ ಜನಪರ ಕಾರ್ಯಗಳು ನಡೆಯುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/15oqLTeDLQ/
ಜಾತ್ರಾ ಸಮಿತಿ ಅಧ್ಯಕ್ಷ ಹೆಚ್. ಲಕ್ಷ್ಮಿನಾರಾಯಣರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶಿರಸಿ ಮಾರಿಕಾಂಬಾ ಜಾತ್ರೆ ಸಮಿತಿ ಅಧ್ಯಕ್ಷ ರವೀಂದ್ರ ಜಿ ನಾಯಕ್, ಸಾಗರ ಮಾರಿಕಾಂಬ ಜಾತ್ರೆ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಜಿಲ್ಲಾ ಯುವ ಒಕ್ಕೂಟದ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪ್ರಮುಖರಾದ ಶ್ರೀನಿವಾಸ್ ಕಾಮತ್, ಸರ್ಕಲ್ ಗಿರೀಶ್, ಸುನಂದಮ್ಮ, ಶೇಷಮ್ಮ, ಹೊಬ್ಳಿದಾರ್, ಜಾತ್ರಾ ಸಮಿತಿ ಸಂಚಾಲಕರಾದ ಸುನೀಲ್ ಕುಮಾರ್,ಮನೋಹರ್, ಗೋಪಿ, ಎ.ವಿ.ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಶ್ವಿನಿ ಪಂಡಿತ್ ನಿರೂಪಿಸಿ, ವಂದಿಸಿದರು.