ರಿಪ್ಪನ್ಪೇಟೆ : ಬಸ್ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ನಡೆದಿದೆ.
ಶಿಕಾರಿಪುರ ನಿವಾಸಿ ಶೃತಿ (34) ಹಾಗೂ ರಿಪ್ಪನ್ಪೇಟೆಯ ಸತೀಶ್ (49) ರವರಿಗೆ ಗಂಭೀರ ಗಾಯಗಳಾಗಿವೆ.
ಸಾಗರದಿಂದ ತೀರ್ಥಹಳ್ಳಿಗೆ ಚಲಿಸುತ್ತಿದ್ದ ಖಾಸಗಿ ಬಸ್ (ಭಾಗ್ಯಲಕ್ಷ್ಮಿ) ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ಶಿಕಾರಿಪುರದಿಂದ ರಿಪ್ಪನ್ಪೇಟೆಗೆ ಬಂದಿದ್ದ ಶೃತಿ ಹಾಗೂ ಇಬ್ಬರು ಮಕ್ಕಳನ್ನು ಬಸ್ಸಿನಿಂದ ಇಳಿಸಲು ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ಅವರನ್ನು ಕರೆದುಕೊಂಡು ಹೋಗಲು ಸ್ಕೂಟಿಯಲ್ಲಿ ಬಂದಿದ್ದ ಸತೀಶ್ ಅಲ್ಲಿಯೇ ನಿಂತಿದ್ದರು ಈ ಸಂಧರ್ಭದಲ್ಲಿ ಏಕಾಏಕಿ ಮಾವಿನ ಮರದ ಬೃಹತ್ ರೆಂಬೆ ಬಸ್ ಮೇಲೆ ಬಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಗಾಯಾಳುಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ರಿಪ್ಪನ್ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.