ಶಿಕಾರಿಪುರ : ತಾಲ್ಲೂಕಿನ ರೈತರ ಜೀವನಾಡಿಯಾದ ಅಂಬ್ಲಿಗೊಳ ಹಾಗೂ ಅಂಜನಾಪುರ ಜಲಾಶಯಗಳು ಭರ್ತಿಯಾಗಿವೆ, ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ವರ್ಷಧಾರೆ ಕಂಡುಬಂದ ಪರಿಣಾಮ, ಈ ಜಲಾಶಯಗಳು ತಮ್ಮ ನೈಜ ಸೊಬಗನ್ನು ಮರಳಿ ಪಡೆದುಕೊಂಡಿವೆ.

ಇಂದು ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕುಟುಂಬ ಸಮೇತರಾಗಿ ಸ್ಥಳಕ್ಕೆ ಭೇಟಿ ನೀಡಿದ್ದು, ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿದರು. ಈ ಸಂದರ್ಭ ಅವರು ಜಲಾಶಯವನ್ನು ಭರ್ತಿ ಮಾಡಿದ ಮಳೆಗೂ ದೇವರಿಗೆ ಕೃತಜ್ಞತೆ ಸಲ್ಲಿಸಿದರು.

ಅನ್ನದಾತನ ಮೊಗದಲ್ಲಿ ಭರವಸೆಯ ಮಂದಹಾಸ ಮೂಡಿದ್ದು, ಈ ಸಾಲಿನಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಜೋರಾಗಿದೆ. ಮಳೆ, ನೀರು ಮತ್ತು ಭದ್ರತೆಯೊಂದಿಗೆ ಈ ಬಾರಿ ಕೃಷಿಯ ಭವಿಷ್ಯ ಹಸಿರು ನಿರೀಕ್ಷೆಗಳಿಂದ ತುಂಬಿದೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಹಲವಾರು ಮುಖಂಡರು, ಹಿರಿಯರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.