ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಬಡ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ವಿನೂತನ ಕಾರ್ಯಕ್ರಮವನ್ನು ಆಗಸ್ಟ್ 16ರಂದು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ನಗರದ ಜಿಲ್ಲಾ ಕೋರ್ಟ್ ಸಮೀಪದ ಬಂಜಾರ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಥಮ ಹಂತದಲ್ಲಿ ಆಯ್ಕೆಯಾದ 10 ಬಡ ಕುಟುಂಬಗಳಿಗೆ ನಾಟಿ ಕೋಳಿ ಹಾಗೂ ಸುಸಜ್ಜಿತ ಗೂಡುಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಸಂಸದರ ಜನ್ಮದಿನವನ್ನು ಹೂಹಾರ, ಕೇಕ್ ಕತ್ತರಿಸುವ ಸಂಭ್ರಮಕ್ಕೆ ಮಾತ್ರ ಸೀಮಿತಗೊಳಿಸದೆ, ಬಡ ಕುಟುಂಬಗಳಿಗೆ ದಿನನಿತ್ಯ ಆದಾಯ ತರುವ ಉಪಕಸುಬು ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಿವಿ 380 ತಳಿ ಕೋಳಿ ವಿತರಣೆ
ಆಯ್ಕೆಯಾದ ಪ್ರತಿಯೊಂದು ಕುಟುಂಬಕ್ಕೂ ತಮಿಳುನಾಡಿನ ಬಿವಿ 380 ತಳಿಯ 25 ನಾಟಿ ಕೋಳಿಗಳನ್ನು ನೀಡಲಾಗುತ್ತದೆ. ಈ ತಳಿ ಕೋಳಿಗಳು ಹೆಚ್ಚು ಮೊಟ್ಟೆ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಕುಟುಂಬಗಳಿಗೆ ನಿಯಮಿತ ಆದಾಯದ ಮೂಲವಾಗಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಕೋಳಿಗಳ ಜೊತೆಗೆ ಅವುಗಳ ಪಾಲನೆಗೆ ಅನುಕೂಲವಾಗುವಂತೆ ಗೂಡು ಕೂಡ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಫಲಾನುಭವಿಗಳು ಮನೆಮಟ್ಟದಲ್ಲೇ ಕೋಳಿ ಸಾಕಾಣಿಕೆ ಆರಂಭಿಸಲು ಸಾಧ್ಯವಾಗಲಿದೆ.
ತಿಂಗಳಿಗೆ ಆದಾಯದ ನಿರೀಕ್ಷೆ
ಪ್ರಸ್ತುತ ಮಾರುಕಟ್ಟೆಯಲ್ಲಿ ನಾಟಿ ಮೊಟ್ಟೆಗೆ ಉತ್ತಮ ಬೇಡಿಕೆ ಇರುವುದರಿಂದ, 25 ಕೋಳಿಗಳಿಂದ ದಿನನಿತ್ಯ ಆದಾಯ ಗಳಿಸುವ ಅವಕಾಶ ಇದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ತಿಂಗಳಿಗೆ ಸುಮಾರು ₹12,000ರವರೆಗೆ ಆದಾಯ ಗಳಿಸುವ ಸಾಧ್ಯತೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದು ಒಂದು ಬಾರಿಯ ಸಹಾಯವಲ್ಲ, ಬಡ ಕುಟುಂಬಗಳ ದಿನನಿತ್ಯದ ಖರ್ಚು, ಜೀವನೋಪಾಯ ಹಾಗೂ ಆರ್ಥಿಕ ಸಬಲತೆಗೆ ನಿರಂತರ ನೆರವಾಗುವ ಯೋಜನೆ ಎಂಬುದು ಕಾರ್ಯಕ್ರಮದ ಆಶಯವಾಗಿದೆ.
‘ಮನೆಗೊಂದು ಮೊಟ್ಟೆ, ನಾಡಿಗೂ ಮೊಟ್ಟೆ’
ಬಡ ಕುಟುಂಬಗಳು ಸ್ವಾವಲಂಬಿ ಬದುಕು ಸಾಗಿಸಲು ಸಣ್ಣ ಮಟ್ಟದ ಉದ್ಯೋಗ ಮತ್ತು ಉಪಕಸುಬುಗಳು ನೆರವಾಗುತ್ತವೆ , ಕುರಿ, ಕೋಳಿ, ಹಸು ಸಾಕಾಣಿಕೆಂತಹ ಪಶುಸಂಗೋಪನಾ ಚಟುವಟಿಕೆಗಳು ಪ್ರತಿಯೊಂದು ಮನೆಯ ಆರ್ಥಿಕ ಬೆನ್ನೆಲುಬಾಗಬೇಕು. “ಮನೆಗೊಂದು ಮೊಟ್ಟೆ, ನಾಡಿಗೂ ಮೊಟ್ಟೆ” ಎಂಬ ಪರಿಕಲ್ಪನೆಯೊಂದಿಗೆ ಕುಟುಂಬಗಳು ಆರ್ಥಿಕವಾಗಿ ಬಲವಾಗಬೇಕು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ .
ಫಲಾನುಭವಿಗಳಿಗೆ ಕೋಳಿಗಳ ಜೊತೆಗೆ ಸೂಕ್ತ ನಿರ್ವಹಣೆ ಹಾಗೂ ಅಧಿಕೃತತೆಗಾಗಿ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.
ಸಂಸದ ಬಿ.ವೈ. ರಾಘವೇಂದ್ರ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಜನಪರ ಕಾರ್ಯಕ್ರಮಗಳನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.

