ರಿಪ್ಪನ್ಪೇಟೆ ; ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದೊಳಗೆ ರಾತ್ರಿ ವೇಳೆ ಕಿಡಿಗೇಡಿಗಳು ಎಣ್ಣೆ ಪಾರ್ಟಿ ಮಾಡಿರುವ ಕೃತ್ಯವನ್ನು ಖಂಡಸಿ ಪೋಷಕರು, ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಸ್ಥಳಕ್ಕೆ ಅಬಕಾರಿ, ಪೊಲೀಸ್ ಇಲಾಖೆಯವರು ಭೇಟಿ ನೀಡಿ ಪ್ರತಿಭಟನಾ ನಿರಂತರ ಅಹವಾಲು ಅಲಿಸಿ ತಕ್ಷಣ ಈ ಕೃತ್ಯ ಎಸಗಿರುವವರ ಮತ್ತು ಮಾರಾಟ ಮಾಡಿದ ಅನಧಿಕೃತ ದಿನಸಿ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾ ನಿರಂತರಿಗೆ ಭರವಸೆ ನೀಡಿದರು.
ಇಂದು ಬೆಳಗ್ಗೆ ಶಾಲೆಗೆ ಬಂದಂತಹ ವಿದ್ಯಾರ್ಥಿಗಳು ಕಟ್ಟೆಯ ಮೇಲೆ ಮದ್ಯದ ಪ್ಯಾಕ್ ಇರುವುದನ್ನು ಗಮನಿಸಿ ತಕ್ಷಣ ಶಿಕ್ಷಕರಿಗೆ ಮತ್ತು ತಮ್ಮ ಪೋಷಕರಿಗೆ ವಿಷಯ ತಿಳಿಸುತ್ತಿದ್ದಂತೆ ಗ್ರಾಮಸ್ಥರು ಪೋಷಕ ವರ್ಗ ನೂರಾರು ಸಂಖ್ಯೆಯಲ್ಲಿ ಶಾಲೆಯ ಬಳಿ ಜಮಾಯಿಸಿ ಇಂತಹ ಹೀನ ಕೃತ್ಯ ಎಸಗಿರುವ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಗ್ರಾಮದಲ್ಲಿನ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆ ಪೋಷಕರು ಪಟ್ಟುಹಿಡಿದರು. ಪೊಲೀಸ್ ಸಬ್ಇನ್ಸ್ಪೆಕ್ಟರ್ ರಾಜುರೆಡ್ಡಿ ಬೆನ್ನೂರು ಮತ್ತು ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಸಿಬ್ಬಂದಿವರ್ಗ ಭೇಟಿ ನೀಡಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಸ್ಥಳೀಯರು ಹೇಳುವ ಪ್ರಕಾರ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಶಾಲೆ ಆವರಣದಲ್ಲಿ ಅನಾಮಿಕ ವ್ಯಕ್ತಿಗಳು ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡು ಬರುತ್ತಿತ್ತು. ಆದರೆ ಇತ್ತೀಚೆಗೆ ವಿಷಯ ತೀವ್ರ ಸ್ವರೂಪ ಪಡೆದು ಅವರು ಶಾಲಾ ಕಟ್ಟಡದ ಒಳಗೆ ನುಗ್ಗಿ ಕುಡಿತ ಮಾಡಿರುವುದರಿಂದ ವಿದ್ಯಾರ್ಥಿಗಳ ಭದ್ರತೆ ಕುರಿತು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಅವಡೆ ಶಿವಪ್ಪ, ರಾವಣಕಟ್ಟೆ ನಾಗಪ್ಪ, ಜಯಂತ, ಪ್ರಭಾಕರ, ಪ್ರದೀಪ, ಸುದೀಪ, ಚಂದ್ರಶೇಖರ, ಗುರುಮೂರ್ತಿ ಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ, ಚಂದ್ರಕಲಾ, ಹೇಮಾವತಿ, ಅರುಣ್ಕಟ್ಟೆ, ಯೋಗೇಂದ್ರ, ಕುಮಾರ, ರಾಜೇಶ, ಶಶಿಧರ, ಜಯಂತ, ಇನ್ನಿತರರು ಪಾಲ್ಗೊಂಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.