ಹೊಸನಗರ : ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶಿವರಾಮ ಕಾರಂತರ ಮರಳಿ ಮಣ್ಣಿಗೆ, ಅನಂತಮೂರ್ತಿ ಅವರ ಸಂಸ್ಕಾರ ಹಾಗೂ ಎಸ್.ಎಲ್.ಭೈರಪ್ಪನವರ ಅನೇಕ ಕಾದಂಬರಿಗಳು ಸಾಹಿತ್ಯಾಸಕ್ತರನ್ನು ತನ್ನತಾನೆ ಓದಿಸಿಕೊಂಡು ಹೋಗುತ್ತದೆ ಎಂದು ನಿಟ್ಟೂರು ಪದವಿಪೂರ್ವ ಕಾಲೇಜ್ನ ಪ್ರಾಂಶುಪಾಲ ಗಣೇಶ್ ತಿಳಿಸಿದರು.
ತಾಲೂಕಿನ ನಗರ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಕಲೆ ಸಾಹಿತ್ಯ, ನಾಡು-ನುಡಿ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ದತ್ತಿದಾನಿ ದಿ. ಗಣೇಶ್ ಐತಾಳ್ ಸಹಪಾಠಿಯಾಗಿದ್ದು, ಸಾಹಿತ್ಯ ಆಸಕ್ತರಾಗಿದ್ದ ಅವರದೇ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಲು ತಮಗೆ ಹೆಮ್ಮೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, ಐತಿಹಾಸಿಕ ಪುರಾತನ ಕೋಟೆ ಸಮೀಪದ ಶಾಲೆಯಲ್ಲಿ ದತ್ತಿ ಕಾರ್ಯಕ್ರಮದಲ್ಲಿ ಆಯೋಜಿಸಿರುವುದು ನಮ್ಮೆಲ್ಲರ ಪಾಲಿನ ಭಾಗ್ಯ ಎಂದರು. ಇಂದಿನ ನಗರ ಪಟ್ಟಣದ ಇತಿಹಾಸ ಅರಿಯಲು ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ಸಂಶೋಧಕ, ಸಾಹಿತಿ ಅಂಬ್ರಯ್ಯಮಠ ಅವರ ಪುಸ್ತಕಗಳ ಕಣ್ಣು ಹಾಯಿಸಬೇಕೆಂಬ ಸಲಹೆ ನೀಡಿದರು.
ಆಕಾಶವಾಣಿ – ದೂರದರ್ಶನ ಕಲಾವಿದೆ, ವಕೀಲೆ ನಲ್ಲುಂಡೆ ಎನ್.ವಿ.ಲಲಿತ ಅವರು ನೀಡಿದ ದತ್ತಿ ಕಾರ್ಯಕ್ರಮ ಕುರಿತು ಉಪನ್ಯಾಸಕಿ ಮಾಲಾಶ್ರೀ ಮಾತನಾಡಿ, ಕವಿತೆ ಲಯಬದ್ದವಾಗಿ ಸಂಗೀತದೊಂದಿಗೆ ಮೇಳೈಸಿದಾಗ ಎಂತಹ ಮನಸ್ಸು ಸಹ ಮುದಗೊಳ್ಳುವುದು. ಆದರೆ, ಸಾಕಷ್ಟು ಅಧ್ಯಯನ ಇಲ್ಲದ ಕಥೆ, ಕವನ ರಚನೆ ಸ್ವಾರಸ್ಯ ರಹಿತವಾಗುತ್ತದೆ ಎಂಬ ಕವಿಮಾತು ಹೇಳಿದರು.
ನಗರ ವಿದ್ಯಾಸಂಸ್ಥೆಯ ಪ್ರಾಚಾರ್ಯೆ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಶಿಕ್ಷಣ ಒತ್ತಡ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ವಿಷಾಧ ವ್ಯಕ್ತಪಡಿಸಿದರು.
ಕಸಾಪ ನಗರ ಹೋಬಳಿ ಘಟಕದ ಅಧ್ಯಕ್ಷ ನಾರಾಯಣ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ ನಾಗರಕೊಡಿಗೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ನಿರೂಪಿಸಿದರು. ನಿವೃತ್ತ ಶಿಕ್ಷಕ ಶಂಕರಪ್ಪ ವಂದಿಸಿದರು.

