ರಿಪ್ಪನ್ಪೇಟೆ ; ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಾಗಿ 56 ಸಾವಿರ ಕೋಟಿ ಹಣ ವ್ಯಯವಾಗುತ್ತಿದ್ದರೂ ಕೂಡಾ ಅಭಿವೃದ್ದಿ ಕಾರ್ಯಗಳು ಆನುದಾನದ ಕೊರತೆಯಿಂದ ಕುಂಠಿತಗೊಂಡಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ ಜನರ ಮೂಲಭೂತ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಬಾಳೂರು ಬೋರ್ಡ್ಗಲ್ ನಿಂದ ಕಾಳೇಶ್ವರ ಸಂಪರ್ಕ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಬಾಳೂರು ಗ್ರಾಮ ಪಂಚಾಯಿತ್ ಕಾರ್ಯಾಲಯದಲ್ಲಿ ಗ್ರಂಥಾಲಯದ “ಅರಿವಿನ ಕೇಂದ್ರವನ್ನು’’ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯ ನಂತರ ಗ್ರಾಮ ಪಂಚಾಯಿತ್ ಆಡಳಿತ ಮಂಡಳಿಯವರು ಗ್ರಂಥಾಲಯ ಕಟ್ಟಡಕ್ಕೆ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದರು ಅದರಂತೆ ಸರ್ಕಾರದಿಂದ 5 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದರೊಂದಿಗೆ ಅರಿವಿನ ಕೇಂದ್ರಕ್ಕೆ ಸಾರ್ವಜನಿಕರ ಸಹಕಾರ ಪಡೆದು ಅಗತ್ಯವಿರುವಂತಹ ಲೇಖಕರ ಸಾಹಿತಿಗಳ ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಸಂಘದವರು ನಮಗೆ ಸ್ತ್ರಿಶಕ್ತಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಸಲ್ಲಿಸಲಾಗಿ ತಕ್ಷಣ ಶಾಸಕರು ತಮ್ಮ ಸಂಘ ನೋಂದಣಿಯಾಗಿರಬೇಕು ಮತ್ತು ಪಂಚಾಯಿತ್ ವ್ಯಾಪ್ತಿಯಲ್ಲಿ ಖಾಲಿ ಜಾಗ ನಿಮ್ಮ ಸಂಘದ ಹೆಸರಿನಲ್ಲಿ ಮಂಜೂರಾಗಿರಬೇಕು ಇಲ್ಲದೇ ಇದ್ದರೆ ಹಣ ವಾಪಾಸ್ಸು ಹೋಗುತ್ತದೆ ಇದನ್ನು ಮನಗಂಡು ತಾವು ಕೇಳಿದಂತೆ ಅನುದಾನ ಕೊಡಿಸಲು ನಾನು ಸದಾ ಸಿದ್ದವಿರುವುದಾಗಿ ಮಹಿಳೆಯವರಿಗೆ ಮನವರಿಕೆ ಮಾಡಿಕೊಟ್ಟರು.
ನಮಗೂ ಶಕ್ತಿ ಯೋಜನೆ ಸೌಲಭ್ಯ ಕಲ್ಪಿಸಿ :
ಸಾಗರ – ತೀರ್ಥಹಳ್ಳಿ ಮತ್ತು ಹೊಸನಗರ – ಶಿವಮೊಗ್ಗ ಮಾರ್ಗದಲ್ಲಿ ರಾಜ್ಯ ಸರ್ಕಾರಿ ಬಸ್ಗಳನ್ನು ಬಿಡುವ ಮೂಲಕ ಸರ್ಕಾರದ ಶಕ್ತಿ ಯೋಜನೆಯ ಸೌಲಭ್ಯ ಕಲ್ಪಿಸಿ ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದರು. ಆಗ ಶಾಸಕರು ಶೀಘ್ರದಲ್ಲಿ ಸಾಗರ – ಆನಂದಪುರ – ರಿಪ್ಪನ್ಪೇಟೆ – ತೀರ್ಥಹಳ್ಳಿ ಮಾರ್ಗ ಹೊರನಾಡು – ಶೃಂಗೇರಿ – ಧರ್ಮಸ್ಥಳ – ಸುಬ್ರಮಣ್ಯ ಮತ್ತು ಸಾಗರ ಮಣಿಪಾಲ – ಚಿಕ್ಕಮಗಳೂರು ಮಾರ್ಗವಾಗಿ ಸರ್ಕಾರಿ ಬಸ್ ಓಡಿಸಲಾಗುವುದೆಂದು ಭರವಸೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಬಳಕೆಗೆ ಸೂಚನೆ :
ಕೇಂದ್ರ ಸರ್ಕಾರ ಖಾತ್ರಿ ಯೋಜನೆ ಕಡಿತಗೊಳಿಸಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಖಾತ್ರಿ ಯೋಜನೆಯನ್ನು ಮುಂದುವರಿಸಿ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದ್ದು ರೈತರು ಅಡಿಕೆ ತೋಟ ನಿರ್ಮಾಣ ಸೇರಿದಂತೆ ಇತರ ವಯಕ್ತಿಕ ಕಾಮಗಾರಿ ನಿರ್ವಹಿಸಿಕೊಳ್ಳುವ ಮೂಲಕ ಅಭಿವೃದ್ದಿ ಹೊಂದಲು ಕರೆ ನೀಡಿ ತೋಟಗಾರಿಕೆ ಇಲಾಖೆಯ ಮೂಲಕ ಕಾಮಗಾರಿ ಮಾಡದೆ ನೇರವಾಗಿ ಗ್ರಾಮಾಡಳಿತದ ಮೂಲಕ ಅಡಿಕೆ ತೋಟ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ಈಗಾಗಲೇ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಹಳ್ಳಿ ಕಸಬಾ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಂಪರ್ಕ ರಸ್ತೆ ಹಾಳಾಗಿ ಓಡಾಡದಂತಾಗಿದವು ಕೇವಲ ಎರಡು ವರ್ಷದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ದಿಪಡಿಸಲಾಗಿದ್ದು ಕೆಲವು ರಸ್ತೆಗಳು ಕಾಂಕ್ರೀಟ್ ರಸ್ತೆಗಲಾಗಿ ಮತ್ತು ಇನ್ನೂ ಕೆಲವು ರಸ್ತೆಗಳನ್ನು ಡಾಂಬರೀಕರಣ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲಾಗಿದೆ. ಇನ್ನೂ ಆನಂದಪುರ – ರಿಪ್ಪನ್ಪೇಟೆ ರಾಜ್ಯ ಹೆದ್ದಾರಿಯ ಒಟ್ಟು 27 ಕೋಟಿ ರೂ. ಅನುದಾನದೊಂದಿಗೆ ದ್ವಿಪಥ ರಸ್ತೆ ಆಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದ್ದು ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.

ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪಗೌಡ, ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಚಿದಂಬರ್, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಬಾಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ರಾಜುಗೌಡ, ದಿವಾಕರ, ಶಿವಮ್ಮ, ಲೀಲಾವತಿ, ಪಾರ್ವತಮ್ಮ, ರೇಖಾ, ಶಶಿಕಲಾ, ಬಾಳೂರು ಘಟಕದ ಕಾಂಗ್ರೆಸ್ ಅಧ್ಯಕ್ಷ ಸಂತೋಷ (ಚಿಂಟು), ಸಣ್ಣಕ್ಕಿ ಮಂಜು, ಶಿವು ವಡಾಹೊಸಳ್ಳಿ, ಉಮಾಕರ್ ತಮ್ಮಡಿಕೊಪ್ಪ, ರಿಪ್ಪನ್ಪೇಟೆ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಗಣಪತಿ ಗವಟೂರು, ಪ್ರಕಾಶ ಪಾಲೇಕರ್, ಮಹಾಲಕ್ಷ್ಮಿ, ಸಾರಾಭಿ, ಆಸಿಫ್ ಭಾಷಾ, ಆರ್.ವಿ.ನಿರೂಪ್ ಕುಮಾರ್, ರವೀಂದ್ರ ಕೆರೆಹಳ್ಳಿ, ಇನ್ನಿತರ ಮುಖಂಡರು ಪಾಲ್ಗೊಂಡಿದರು.