ಶಿವಮೊಗ್ಗ:ಸೌಜನ್ಯ ಪ್ರಕರಣ ಸೇರಿದಂತೆ ಇತರ ವಿವಾದಿತ ಘಟನೆಗಳನ್ನು ಆಧಾರವಾಗಿಸಿಕೊಂಡು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಲು ಹೋಗಬಾರದು ಎಂಬ ಎಚ್ಚರಿಕೆಯನ್ನು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕದ ಧರ್ಮಸ್ಥಳವನ್ನು ನಾವು ಒಂದು ರೀತಿಯ ಕಾಶಿ ಎಂದು ಪರಿಗಣಿಸುತ್ತೇವೆ. ಅದರ ಬಗ್ಗೆ ಇತ್ತೀಚೆಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವುದು ಶೋಚನೀಯ. ನನ್ನ ಅಭಿಪ್ರಾಯದಲ್ಲಿ ಯಾರೂ ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅದು ತಪ್ಪು,” ಎಂದು ಹೇಳಿದರು.
ಧರ್ಮಸ್ಥಳದ ಭಕ್ತಿಗುರುತು:
“ಧರ್ಮಸ್ಥಳದ ಕುರಿತು ಲಕ್ಷಾಂತರ ಭಕ್ತರು ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಮೇಲೂ ಬಹಳ ಗೌರವವಿದೆ. ನಾವು ಕೂಡಾ ಆ ಕ್ಷೇತ್ರದ ಮೇಲಿನ ನಂಬಿಕೆಯನ್ನು ಮೊದಲಿನಿಂದಲೂ ಇಟ್ಟುಕೊಂಡಿದ್ದೇವೆ,” ಎಂದು ಬೇಳೂರು ಹೇಳಿದರು.
ಸರ್ಕಾರದ ನಿಲುವು ಸ್ಪಷ್ಟ:
“ನಮ್ಮ ಸರ್ಕಾರ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಇಚ್ಛೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಯತ್ನಿಸಿತ್ತು. ಆದರೆ ನಾವು ಆ ದಾರಿಯಲ್ಲಿ ಹೋಗುವುದಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯವಾಗಿ ಹಸ್ತಕ್ಷೇಪ ಮಾಡಲ್ಲ. ಮಾಡಬಾರದು” ಎಂದರು

