ರಿಪ್ಪನ್ಪೇಟೆ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆಯೊಂದಿಗೆ ಆಚರಿಸುವಂತೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ ಕರೆ ನೀಡಿದರು.
ಸೆಪ್ಟಂಬರ್ 3 ರಿಂದ 6 ರವರೆಗೆ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಅಂಗವಾಗಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಾಮೂಹಿಕ ಮೆರವಣಿಗೆಯಲ್ಲಿ ಹೆಚ್ಚಿನ ಕರ್ಕಶ ಧ್ವನಿವರ್ಧಕವನ್ನು ಬಳಕೆ ಮಾಡದೆ ಮತ್ತು ರಸ್ತೆಯಂಚಿನಲ್ಲಿ ಬ್ಯಾನರ್, ಪ್ಲೆಕ್ಸ್ ಹಾಗೂ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಳವಡಿಸಿಕೊಳ್ಳುವುದು. ಹಬ್ಬ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸುವುದರ ಬಗ್ಗೆ ಮುಸ್ಲಿಂ ಸಮುದಾಯದವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಲ್ಲದೆ ತಮ್ಮ ಮಸೀದಿಗೆ ಹೊರ ಊರುಗಳಿಂದ ಬರುವ ಯುವಕರ ಬಗ್ಗೆ ತಾವು ನಿಗಾ ವಹಿಸಿ ಅಂತಹವರನ್ನು ಮೇಲೆ ಹದ್ದಿನ ಕಣ್ಣು ಇರಿಸಿಕೊಳ್ಳುವ ಮೂಲಕ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ ಅವರು, ಹಿಂದೂ-ಮುಸ್ಲಿಂ ಭೇದ ಭಾವನೆ ತೊರದೆ ಎಲ್ಲರೂ ಶಾಂತಿ ಸೌಹಾರ್ದತೆಯೊಂದಿಗೆ ಭಾವೈಕ್ಯತೆಯಿಂದ ನಡೆದುಕೊಳ್ಳುವಂತೆ ಕರೆ ನೀಡಿದರು.

ಮುಸ್ಲಿಂ ಮುಖಂಡ ಆರ್.ಎ.ಚಾಬುಸಾಬ್, ಜುಮ್ಮಾ ಮಸೀದಿಯ ಅಧ್ಯಕ್ಷರು ಮೆಕ್ಕಾ ಮಧೀನ ಮಸೀದಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಈದ್ ಮಿಲಾದ್ ಹಬ್ಬದ ಸಮಿತಿಯ ಅಧ್ಯಕ್ಷರು ಇಸ್ಮಾಯಿಲ್, ಇನ್ನಿತರ ಸದಸ್ಯರು ಸೇರಿದಂತೆ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ, ಎಂ.ಸುರೇಶ್ ಸಿಂಗ್, ಎಂ.ಬಿ.ಮಂಜುನಾಥ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಸುಂದರೇಶ್, ನಿರೂಪ್ ಕುಮಾರ್, ಆಸೀಫ್ಭಾಷಾ, ಇನ್ನಿತರರು ಮಾತನಾಡಿ, ತಮ್ಮ ಅನಿಸಿಕೆಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಸಲಹೆ ಸೂಚನೆ ನೀಡಿದರು.
ಬಿಲ್ಲೇಶ್ವರ, ಕೋಡೂರು, ಕೆಂಚನಾಲ, ಗಾಳಿಬೈಲು, ಗರ್ತಿಕೆರೆ, ಎಣ್ಣೆನೋಡ್ಲು, ರಿಪ್ಪನ್ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮಸೀದಿಯವರು ಪಾಲ್ಗೊಂಡು ತಮ್ಮ ಈದ್ ಮಿಲಾದ್ ಹಬ್ಬದ ಕುರಿತು ಪೊಲೀಸ್ ಶಾಂತಿ ಸಮಿತಿ ಸಭೆಗೆ ಮಾಹಿತಿ ನೀಡಿದರು.

