ಹೊಸನಗರ ; ಇಲ್ಲಿನ ತಾಲೂಕು ಆರ್ಯ ಈಡಿಗ ವಿದ್ಯಾವರ್ಧಕ ಸಂಘದಲ್ಲಿ ಭಾರಿ ಅವ್ಯವಹಾರ ಮತ್ತು ನಿಯಮ ಬಾಹಿರ ಸಭೆಯನ್ನು ಖಂಡಿಸಿ ಮಾಜಿ ಶಾಸಕ ಬಿ. ಸ್ವಾಮಿರಾವ್ ಇಲ್ಲಿನ ಬಸ್ ನಿಲ್ದಾಣದ ಸಮೀಪದ ಆರ್ಯ ಈಡಿಗ ಸಂಘದ ಎದುರುಗಡೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಅವರು ಶಾಸಕರಾಗಿದ್ದಾಗ ಈ ಜಾಗವನ್ನು ಆರ್ಯ ಈಡಿಗ ವಿದ್ಯಾವರ್ಧಕ ಸಂಘಕ್ಕೆ ತೆಗೆದುಕೊಂಡು ಅಲ್ಲಿ ಒಂದಷ್ಟು ಮಳಿಗೆಗಳನ್ನು ಕಟ್ಟಿಸಿ ಸಂಘಕ್ಕೆ ನಿರಂತರವಾಗಿ ಆದಾಯ ಬರುವಂತೆ ನೋಡಿಕೊಂಡಿದ್ದರು. ಆದರೆ ಸ್ವಾಮಿರಾವ್ ನಂತರ ಅಧಿಕಾರವನ್ನು ಹಿಡಿದ ಈಡಿಗ ಮುಖಂಡರು ಕಳೆದ ಹತ್ತು ಹದಿನೈದು ವರ್ಷದಿಂದ ಸಂಘದ ಏಳಿಗೆಗೆ ಮನಸ್ಸು ಮಾಡಲಿಲ್ಲ ಮತ್ತು ಸಂಘದ ಯಾವುದೇ ಜನರಲ್ ಬಾಡಿ ಸಭೆಯನ್ನು ಕರೆಯದೆ ಸಂಘದ ಅವ್ಯವಹಾರ ಮಾಡಿದ್ದಾರೆ ಎಂದು ಸ್ವಾಮಿರಾವ್ ದೂರಿದ್ದು ಈ ಹಿಂದೆನೇ ಈಡಿಗ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ದಿನದಂದು ತಾವು ಪ್ರತಿಭಟನೆ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು. ಆದರೆ, ಸ್ವಜಾತಿ ಮುಖಂಡರ ಮಾತುಗಳನ್ನು ಕೇಳಿ ಪ್ರತಿಭಟನೆಯನ್ನು ಮುಂದಕ್ಕೆ ಹಾಕಿದ ಅವರು ಇಂದು ಹಠಾತ್ತನೆ ಸಂಘದ ಎದುರಿಗೆ ಪ್ರತಿಭಟನೆಗೆ ಮುಂದಾಗಿದ್ದು ತಮ್ಮ ಬೇಡಿಕೆ ಈಡೇರದೆ ಇದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಈಗಿರುವ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಅಧಿಕಾರ ನಡೆಸುತ್ತಿದ್ದು ತಕ್ಷಣವೇ ಆಡಳಿತ ಮಂಡಳಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನೂತನ ಆಡಳಿತ ಮಂಡಳಿ ರಚನೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಜಿ.ಡಿ ನಾರಾಯಣಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಮುಖರಾದ ರಿಪ್ಪನ್ಪೇಟೆ ಸತೀಶ್, ಡಾ. ರಾಜನಂದಿನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿದಂತೆ ಅನೇಕ ಮುಖಂಡರು ಸ್ವಾಮಿರಾವ್ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಬಿಗಿಪಟ್ಟು ಹಿಡಿದಿರುವ ಸ್ವಾಮಿರಾವ್ ಸದ್ಯಕ್ಕಂತು ಧರಣಿ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಬವಿಸದು ಎಂದಿದ್ದಾರೆ.
ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತ, ವೈದ್ಯರ ಸಹಿತ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಪರಿಶೀಲಿಸಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





