ಹೊಂಬುಜ : ಸಪ್ತವರ್ಣಗಳ ಬಳೆಗಳಿಂದ ಅಭೀಷ್ಠವರಪ್ರಧಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಶೃಂಗಾರವು ಭಕ್ತವೃಂದದವರನ್ನು ಮಂತ್ರಮುಗ್ಧಗೊಳಿಸುವಂತೆ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಪರ್ವದ ಎಂಟನೇಯ ದಿನದಂದು ಆಯೋಜಿಸಲಾಗಿತ್ತು.

ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಧಾರ್ಮಿಕ ವಿಧಿಗಳು ಜಿನಾಗಮೋಕ್ತ ವಿಧಿಯಂತೆ ನೆರವೇರಿತು. ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ನಾಗಸನ್ನಿಧಿಯಲ್ಲಿ ಪೂಜಾ ವಿಧಾನಗಳು ಜರುಗಿತು. ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕವನ್ನು ಶ್ರೀಕ್ಷೇತ್ರದ ಸನ್ನಿಧಿಗೆ ತರಲಾಯಿತು.

“ನವರಾತ್ರಿಯ ಎಂಟನೇಯ ದಿನವನ್ನು ಜೈನ ಧರ್ಮಶಾಸ್ತ್ರದನ್ವಯ ಜೀವದಯಾಷ್ಟಮಿ ಎಂಬುದಾಗಿ ವಿಶೇಷ ಮಹತ್ವವನ್ನು ನೀಡಲಾಗಿದೆ” ಎಂದು ಸ್ವಸ್ತಿಶ್ರೀಗಳವರು ಸರ್ವ ಜೀವರಾಶಿಗಳಲ್ಲಿ ಕಾರುಣ್ಯಭಾವ ತೋರುವ ಅಹಿಂಸಾ ಧರ್ಮದ ಮರ್ಮವನ್ನು ವಿವರಿಸಿದರು. “ಪ್ರತಿಯೋರ್ವರೂ ಪ್ರಾಣಿ, ಪಕ್ಷಿ, ಮರ-ಗಿಡಗಳನ್ನು ಸಂರಕ್ಷಿಸುವಂತಾಗಬೇಕು. ಶ್ರೀ ಪದ್ಮಾವತಿ ದೇವಿಗೆ ಸಮರ್ಪಿಸಿದ ಬಳೆಗಳು ಸುರಕ್ಷಾ ಕವಚದಂತೆ ರಕ್ಷಣೆ ಮಾಡುವ ಧರ್ಮಸಂದೇಶವನ್ನು ಸಾರುತ್ತದೆ” ಎಂದು ಭಕ್ತರನ್ನದ್ದೇಶಿಸಿ ತಿಳಿಸಿದರು. ಶ್ರೀಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಸೇವಾಕರ್ತರಾದ ದೆಹಲಿಯ ನೇಹಾ ಶ್ರೀ ಮನೋಜ ಜೈನ್ ಉಪಸ್ಥಿತರಿದ್ದರು. ಊರ ಪರವೂರ ಭಕ್ತರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಶ್ರಾವಿಕೆಯರು ಜಿನವಾಣಿ ಸ್ತ್ರೋತ್ರಗಳನ್ನು ಸ್ತುತಿಸಿದರು.

ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ.

ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.