ರಿಪ್ಪನ್ಪೇಟೆ : ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಿಸಲು ಸರ್ಕಾರ ವಿಶೇಷ ಅನುದಾನವನ್ನು ನೀಡಿದರೆ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆನವಳ್ಳಿ-ಪುರಮಠ ಸಂಪರ್ಕದ ರಸ್ತೆಯನ್ನು ಕೆಸರು ಗದ್ದೆಯನ್ನಾಗಿಸಲು ಶಾಸಕರ ವಿಶೇಷ ಅನುದಾನ 20 ಲಕ್ಷ ರೂ. ನೀಡಿದಂತಾಗಿದೆ ಎಂದು ಈ ಸಂಪರ್ಕ ರಸ್ತೆಯ ನಾಗರೀಕರು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಶ್ರಮದಾನದ ಮೂಲಕ ರಸ್ತೆಯ ಕೆಸರನ್ನು ತೆಗೆದು ಅಂಚಿನಲ್ಲಿ ಹಾಕಿದ್ದಾರೆ.
‘ಗುತ್ತಿಗೆದಾರ ಎಲ್ಲಿದ್ದೀಯಪ್ಪ? ನಿನ್ನ ಕರ್ಮ ಕಾಂಡದ ಮುಖ ತೋರಿಸಯ್ಯ’ ಎಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಮಾಧ್ಯಮದವರ ಬಳಿ ತೋಡಿಕೊಂಡರು.
ಕ್ಷೇತ್ರದ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಬಹುದಿನಗಳ ಬೇಡಿಕೆಯಂತೆ ಇಲ್ಲಿನ ಅರಸಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆನವಳ – ತಮ್ಮಡಿಕೊಪ್ಪ ಸಂಪರ್ಕ ರಸ್ತೆಗೆ ಜಲ್ಲಿ ಹಾಕಿ ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿಗೆ 20 ಲಕ್ಷ ರೂ. ಹಣವನ್ನು ಶಾಸಕರ ಅನುದಾನದಡಿ ಬಿಡುಗಡೆ ಮಾಡಿ ಟೆಂಡರ್ ಆಗಿ ಕಾಮಗಾರಿ ಮುಗಿಸಿದ್ದು ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ನಿರ್ಮಿಸಿದ ಸಂಪರ್ಕ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಆರು ತಿಂಗಳಲ್ಲೇ ಕೆಸರು ಗದ್ದೆಯಂತಾಗಿ ಯಾರು ತಿರುಗಾಡದಂತಾಗಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಈ ಸಂಪರ್ಕ ರಸ್ತೆಯ ನಿವಾಸಿಗಳು ತಮ್ಮ ವಾಹನಗಳಲ್ಲಿ ಓಡಾಡದಂತೆ ಮಾಡಿದ್ದಾರೆಂದರು.

‘ಓ ಗುತ್ತಿಗೆದಾರನೇ ಎಲ್ಲಿದ್ದೀಯ ನಿನ್ನ ಮುಖ ತೊರಿಸಯ್ಯ…………! ಪುಣ್ಯಾತ್ಮ ಯಾರಯ್ಯ ನೀನು? ಇಂತಹ ರಸ್ತೆ ಕಾಮಗಾರಿ ಮಾಡಿ ಬಂಗ್ಲೆ ನಿರ್ಮಿಸಿಕೊಂಡಿದ್ದೀಯಾ?’ ಎಂಬ ಹಲವು ಪ್ರಶ್ನೆಗಳನ್ನು ಮಾಧ್ಯಮದವರ ಬಳಿ ಹೇಳುತ್ತಾ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಸಾಹೇಬ್ರು ನಮ್ಮ ಊರಿನ ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ತಾವು ಇತ್ತ ಗಮನಹರಿಸಲ್ಲಿಲ್ಲವೇ? ಎಂದು ಆಡಿಕೊಳ್ಳುವಂತಾಗಿ, ಹಾಳಾದ ರಸ್ತೆಯನ್ನು ನಿರ್ಮಿಸಲು ಸರ್ಕಾರ ಅನುದಾನ ನೀಡಿದರೆ ಇಲ್ಲಿನ ಗುತ್ತಿಗೆದಾರ ಮತ್ತು ಇಂಜಿನಿಯರ್
ರಸ್ತೆ ನಿರ್ಮಿಸುವ ಬದಲು ಕೆಸರು ಗದ್ದೆ ನಿರ್ಮಾಣಕ್ಕೆ ಟೆಂಡರ್ ಮಾಡಿದಂತಾಗಿ 20 ಲಕ್ಷ ರೂ. ಗುಳಂ ಮಾಡಿದಂತೆ ಕಾಣುತ್ತಿದ್ದು ಈ ವಿಷಯ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಮತ್ತು ಕ್ಷೇತ್ರ ಶಾಸಕರು ಗಮನಹರಿಸಿ ಕೆಸರು ಗದ್ದೆಯಂತಾಗಿರುವ ರಸ್ತೆಯನ್ನು ದುರಸ್ಥಿಗೊಳಿಸುವರೆ ಕಾದು ನೋಡಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





