ಹೊಸನಗರ ; ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸನಗರ ಪಟ್ಟಣ ಪಂಚಾಯತಿ ಕಾಮಗಾರಿಗಳನ್ನು ನಡೆಸಲು ಸುಮಾರು ಅಂದಾಜು ₹ 2.5 ಕೋಟಿಯಷ್ಟು ಹಣ ಬಿಡುಗಡೆ ಮಾಡಿದ್ದು ಮಳೆಗಾಲ ಮುಗಿದ ತಕ್ಷಣ ಕಾಮಗಾರಿಯನ್ನು ಆರಂಭಿಸುವುದಾಗಿ ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಶಿವಮೊಗ್ಗ – ಹೊಸನಗರ – ಪಟಗುಪ್ಪ ಹುಲಿದೇವರಬನ – ಸಿಗಂದೂರು ಮಾರ್ಗಕ್ಕೆ ಗುರುಶಕ್ತಿ ನೂತನ ಬಸ್ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ನಾನು ಶಾಸಕರಾದ ಮೇಲೆ ಅನೇಕ ಜನಪರವಾದ ಕೆಲಸಗಳನ್ನು ಸರ್ಕಾರದ ಅನುದಾನದಲ್ಲಿ ಮತ್ತು ಸ್ವಂತ ಬಂಡವಾಳದಿಂದ ಕಾಮಗಾರಿಗಳನ್ನು ಮಾಡಿದ್ದೇವೆ. ಬಡವರಿಗೆ ಮನೆ ಕಳೆದುಕೊಂಡವರಿಗೆ ಧನ ಸಹಾಯಹಸ್ತ ನೀಡಿದ್ದೇವೆ. ಮುಂದಿನ ಎರಡೂವರೆ ವರ್ಷದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇವೆ ಹೊಸನಗರ ಪಟ್ಟಣವನ್ನು ನೂತನ ನಗರವನ್ನಾಗಿ ಮಾಡುವ ಬಯಕೆಯಿದೆ ಅದಕ್ಕೆ ಪಟ್ಟಣದ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು.
ಲೇಖನವನ್ನು ಮುಂದುವರಿಸಿ ಓದಿ
ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ₹ 2.5 ಕೋಟಿಯಲ್ಲಿ ಚೌಡಮ್ಮ ರಸ್ತೆಯಲ್ಲಿರುವ ಪಟ್ಟಣ ಪಂಚಾಯತಿ ಕಟ್ಟಡಕ್ಕೆ ₹ 30ಲಕ್ಷ, ಮಟನ್ ಸ್ಟಾಲ್ ಕಾಮಾಗಾರಿಗೆ ₹ 5.50 ಲಕ್ಷ ಬಸ್ ನಿಲ್ದಾಣ ಲಾಡ್ಜಿಂಗ್ ನೂತನ ಕಾಮಗಾರಿಗೆ ₹ 75 ಲಕ್ಷ ಹಾಗೂ ಹೊಸನಗರದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಸುಣ್ಣ-ಬಣ್ಣ, ಟಿ.ವಿ ಹಾಗೂ ಮೇಲ್ಭಾಗಕ್ಕೆ ಶೀಟ್ಗಳನ್ನು ಹಾಕಿ ಸುಂದರ ತಾಣವನ್ನಾಗಿ ಮಾಡಲು ಸುಮಾರು ₹ 95 ಲಕ್ಷ ಹಣವನ್ನು ವ್ಯಯ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಿಮುಲ್ ಅಧ್ಯಕ್ಷ, ಗುರುಶಕ್ತಿ ವಿದ್ಯಾಧರ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಬೃಂದಾವನ ಪ್ರವೀಣ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಗಗ್ಗ ಬಸವರಾಜ್, ಜಯನಗರ ಗೋಪಿ, ಶಿವಪ್ಪ, ನಾಸೀರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

