ಶಿವಮೊಗ್ಗ:ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರು ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿ ಬಿಜೆಪಿ ಸೇರುವುದು ಒಳಿತು ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 5ರಂದು ನಡೆದ ಈ ಸಭೆಯಲ್ಲಿ ಸಂಸದರ ಅಭಿಮಾನಿ ಬಳಗದ ಜೊತೆ ಷಡಾಕ್ಷರಿ ಹಾಜರಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ, ಕಾಂಗ್ರೆಸ್ ಮುಖಂಡ ಯೋಗೇಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಪಕ್ಷಾತೀತವಾಗಿ ಕೆಲಸ ಮಾಡಬೇಕಾದ ಹೊಣೆಗಾರಿಕೆ ಹೊಂದಿರುವವರು. ಆದರೆ, ಷಡಾಕ್ಷರಿ ಬಿಜೆಪಿ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಮಾಡಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ಇರುತ್ತಾ ಬಿಜೆಪಿ ಮುಖಂಡರ ಜೊತೆ ಬಹಿರಂಗವಾಗಿ ಗುರುತಿಸಿಕೊಳ್ಳುವುದು ನೌಕರರಲ್ಲಿ ಗೊಂದಲ ಉಂಟುಮಾಡಬಹುದು,” ಎಂದು ಅವರು ಅಭಿಪ್ರಾಯಪಟ್ಟರು.”ಅದಕ್ಕಾಗಿ ಅವರು ಹುದ್ದೆಯಿಂದ ಹೊರಬಂದು ಬಿಜೆಪಿ ಪಕ್ಷ ಸೇರುವುದೇ ಸೂಕ್ತ,” ಎಂದು ಯೋಗೀಶ್ ಹೇಳಿದರು.
ಯೋಗೇಶ್ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಿದ ಷಡಾಕ್ಷರಿ, ತಮ್ಮ ಹಾಜರಾತಿಗೆ ಯಾವುದೇ ರಾಜಕೀಯ ಬಣ್ಣ ಇಲ್ಲವೆಂದು ಸ್ಪಷ್ಟಪಡಿಸಿದರು. “ನಾನು ಸರ್ಕಾರಿ ನೌಕರನಾಗಿ, ನನಗೆ ಇರುವ ಹೊಣೆಗಾರಿಕೆಯ ಮಿತಿಯೊಳಗೆ ಮಾತ್ರ ಕೆಲಸ ಮಾಡುತ್ತಿದ್ದೇನೆ. ಆ ಕಾರ್ಯಕ್ರಮದಲ್ಲಿ ನಾನು ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಯೋಗೇಶ್ ಅವರು ನಾನು ರಾಜಕೀಯ ಮಾತನಾಡಿದ್ದೇನೆ ಎಂದು ಸಾಬೀತುಪಡಿಸಿದರೆ ಒಪ್ಪುತ್ತೇನೆ,” ಎಂದು ಅವರು ಸವಾಲು ಹಾಕಿದರು.
ಆ ಸಭೆ ಸಿದ್ಧಗಂಗಾ ಮಠಕ್ಕೆ ಅಕ್ಕಿ ಕಳುಹಿಸುವ ಸಂಬಂಧ ನಡೆದದ್ದೆಂದು ತಿಳಿಸಿದರು. “ಈ ಕಾರ್ಯದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಯವರು ಪಾಲ್ಗೊಂಡಿದ್ದರು. ಇದು ಸೇವಾ ಮನೋಭಾವದಿಂದ ನಡೆದ ಕಾರ್ಯಕ್ರಮ, ರಾಜಕೀಯ ಉದ್ದೇಶ ಹೊಂದಿದದ್ದಲ್ಲ,” ಎಂದರು.
ಅವರು ಇನ್ನೂ ಹೇಳಿದರು: “ನಾನು ಬಿಜೆಪಿ ಅಥವಾ ಸಂಸದರ ಬ್ಯಾನರ್ ಕೆಳಗೆ ಕೆಲಸ ಮಾಡಿದ್ದರೆ, ಅದರ ಫೋಟೋ ತೋರಿಸಲಿ. ನಾನೂ ಒಪ್ಪುತ್ತೇನೆ. ಆದರೆ ಈ ವಿಷಯವನ್ನು ಬೇರೆ ರೀತಿಯಲ್ಲಿ ತಿರುಗಿಸಿ ರಾಜಕೀಯ ಪ್ರಚಾರ ಮಾಡುವುದು ಸರಿಯಲ್ಲ. ಇಂತಹ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನೂರಾರು ಫೋಟೋಗಳು ನನ್ನ ಬಳಿ ಇವೆ. ಅವನ್ನೂ ನೀಡಲು ಸಿದ್ಧನಿದ್ದೇನೆ,” ಎಂದರು

