ಹೊಸನಗರ ; ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬಗಳ ವಿಘಟನೆ ಮತ್ತು ವಿಚ್ಛೇದನ ಪ್ರಕರಣಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಆಧುನಿಕ ಜೀವನಕ್ಕೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಈಗಿನ ಪೀಳಿಗೆ ಅನುಸರಿಸಲು ಹೋಗಿ ಕುಟುಂಬದ ಸಾಮರಸ್ಯ ಕಳೆದುಕೊಂಡು ವಿಘಟನೆಗಳು ಹೆಚ್ಚಾಗುತ್ತಿದೆ. ಜನರು ಅವಿಭಕ್ತ ಕುಟುಂಬದ ಮಹತ್ವವನ್ನು ಅರಿಯ ಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕದ ಕುಟುಂಬ ಪ್ರಭೋದನದ ಶಿವಮೊಗ್ಗ ವಿಭಾಗದ ಸಂಯೋಜಕ ವಿಜೇಂದ್ರ ಪ್ರಕಾಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ, ಕುಟುಂಬ ಪ್ರಭೋಧನ, ಆರೋಗ್ಯ ಭಾರತಿ ಸಂಯುಕ್ತ ಆಶ್ರಯದಲ್ಲಿ ನಡೆದ ದಂಪತಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದಂಪತಿಗಳಲ್ಲಿ ಹೊಂದಾಣಿಕೆ ಮುಖ್ಯ. ದಂಪತಿಗಳ ನಡುವೆ ಸ್ವಪ್ರತಿಷ್ಠೆ ಬಾರದೆ ಇದ್ದರೆ ಕುಟುಂಬಗಳು ಚೆನ್ನಾಗಿರುತ್ತವೆ ಎಂಬ ಅಭಿಪ್ರಾಯಪಟ್ಟರು.
ಡಾ. ಪಲ್ಲವಿ ಮಾತನಾಡಿ, ಹಿಂದೂ ಕುಟುಂಬಗಳಲ್ಲಿ ಮುಖ್ಯವಾಗಿ ಹಿರಿಯರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಆಧುನಿಕ ಕುಟುಂಬದ ಸದಸ್ಯರಲ್ಲಿ ಪರಸ್ಪರ ಅತಿಯಾಸೆ, ಮತ್ಸರ ಹೆಚ್ಚಾಗುತ್ತಿದೆ. ಇವುಗಳನ್ನು ತೊರೆದು ಕೂಡಿಬಾಳುವ ಸಂಸ್ಕೃತಿ ಅಳವಡಿಸಿಕೊಂಡರೆ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಇಲ್ಲದಿದ್ದಾಗ ಕುಟುಂಬದಲ್ಲಷ್ಟೆ ಅಲ್ಲದೆ ಸಮಾಜದಲ್ಲೂ ಅಶಾಂತಿ ನೆಲೆಸುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಐದು ದಶಕಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿಗಳಿಗೆ ಸನ್ಮಾನಿಸಲಾಯಿತು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಆರೋಗ್ಯಭಾರತಿಯ ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿನಾಯಕ ಪ್ರಭು ನಿರೂಪಿಸಿ, ಆರತಿ ಮಹೇಶ್ ಪ್ರಾರ್ಥಿಸಿದರು. ಕೇಶವ ಸಂಪೆಕೈ ಸ್ವಾಗತಿಸಿ, ಚಿದಂಬರ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.