ಹೊಸನಗರ ; ಭಾರತದ ಸಂವಿಧಾನದ ಪಿತಾಮಹ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣತಜ್ಞ ನ್ಯಾಯ ಶಾಸ್ತ್ರಜ್ಞ ಸಾಮಾಜಿಕ ಸುಧಾರಕ ಅರ್ಥಶಾಸ್ತ್ರಜ್ಞ ಮತ್ತು ಭಾರತದ ಶ್ರೇಷ್ಠ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.
ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ಮುಖಂಡರು ವಿವಿಧ ಇಲಾಖೆಗಳು ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿ ಹಾಗೂ ಹಸಿರುಕ್ರಾಂತಿ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ್ ರಾಮ್ ರವರ 118ನೇ ಜನ್ಮದಿನಾಚರಣೆಯ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ|| ಬಿ ಆರ್ ಅಂಬೇಡ್ಕರ್ ರವರು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಡಾ|| ಬಿ ಆರ್ ಅಂಬೇಡ್ಕರ್ ರವರಿಗೆ ಸರಿ ಸಾಟಿಯಿಲ್ಲದ ಧೈರ್ಯ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಗಳು ದೈವದತ್ತವಾಗಿ ಬಂದಿದೆ. ಅವುಗಳನ್ನು ಸಮಾಜ ಸುಧಾರಕರಾಗಿ ನ್ಯಾಯ ಶಾಸ್ತ್ರಜ್ಞರಾಗಿ ಸಮಾಜಶಾಸ್ತ್ರದಿಂದ ಮಾನವ ಶಾಸ್ತ್ರದವರೆಗೆ ರಾಜಕೀಯ ಅರ್ಥಶಾಸ್ತ್ರದಿಂದ ಧರ್ಮಶಾಸ್ತ್ರದವರೆಗೆ ಅನೇಕ ವಿಷಯಗಳು ಮತ್ತು ವಿಚಾರಗಳ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಅವರು ಕಟ್ಟಾ ಪ್ರಜಾಪ್ರಭುತ್ವ ವಾದಿಯಾಗಿದ್ದು ಸಮಾಜದಲ್ಲಿ ನೈತಿಕಥೆಯ ನೆಲಗಟ್ಟಿಲ್ಲದೆ ಪ್ರಜಾಪಭುತ್ವ ಮತ್ತು ಕಾನೂನಿನ ನಿಯಮ ಇರಲು ಸಾಧ್ಯವಿಲ್ಲವೆಂದು ಅವರು ನಂಬಿದ್ದರು. ಅವರ ಪಾಲಿಗೆ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದಂತೆಯೇ ಪ್ರಜಾಪ್ರಭುತ್ವ ರಾಜಕೀಯ ಮತ್ತು ನೈತಿಕಥೆಗಳ ತ್ರಿಮೂರ್ತಿ ಗಳಾಗಿದ್ದವು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಬಿ ಎಂ, ರಾಘವೇಂದ್ರ, ಸರೋಜಮ್ಮ, ಚಿದಂಬರ, ಎಸ್ ಹೆಚ್ ನಿಂಗಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರಶೇಟ್, ಮಾವಿನಕೊಪ್ಪ ಮಂಜುನಾಥ್, ಚಂದ್ರಣ್ಣ, ಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಸುಧಾಕರ್ ಜಿ ರವರಿಂದ ಡಾ|| ಬಿ ಆರ್ ಅಂಬೇಡ್ಕರ್ ಮತ್ತು ಡಾ|| ಬಾಬು ಜಗಜೀವನ್ ರಾವ್ ರವರ ಬಗ್ಗೆ ಉಪನ್ಯಾಸ ನೀಡಿದರು.