ಹೊಸನಗರ ; ತಾಲ್ಲೂಕಿನ ಹುಲಿಕಲ್ ಘಾಟಿ ಹೇರ್ಪಿನ್ ತಿರುವು ದುರಸ್ತಿ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ನಗರ ಸಮೀಪದ ಚಕ್ಕಾರು ಗ್ರಾಮದ ಸೂಪರ್ ವೈಸರ್ ಆಗಿದ್ದ ರಾಘವೇಂದ್ರ (37), ಕಾರ್ಮಿಕರಾದ ಹಾವೇರಿ ಜಿಲ್ಲೆಯ ನೀಲವಗಲ್ಲು ಗ್ರಾಮದ ಶಬ್ಬೀರ್ (40), ರಾಜು (30) ಎಂದು ಗುರುತಿಸಲಾಗಿದೆ.

ಹೇಗಾಯ್ತು ಘಟನೆ ?
ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟಿ ಹೇರ್ಪಿನ್ ತಿರುವಿನಲ್ಲಿ ಈ ಹಿಂದೆ ಭೂ ಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರ ಚಕ್ಕಾರು ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕರ ಮೇಲೆ ಮಣ್ಣು ಜಾರಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಹೊರತೆಗೆಯಲು ಎಸ್ಡಿಆರ್ಎಫ್ ತಂಡ ಮಂಗಳೂರಿನಿಂದ ಹೊರಟಿದೆ.
ಲೇಖನವನ್ನು ಮುಂದುವರಿಸಿ ಓದಿ
ಇನ್ನು ಘಟನೆಯಲ್ಲಿ ಸುಮಂತ, ಪರಮೇಶ್, ಅಶೋಕ್ ಹಾಗೂ ಸಚಿನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮಗಾರಿ ನಡೆಯುವ ವೇಳೆ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರದಿಂದ ಈ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಸಂಚಾರ ಸಂಪೂರ್ಣ ಬಂದ್ !
ಘಟನೆಯಿಂದಾಗಿ ಶಿವಮೊಗ್ಗ – ಕುಂದಾಪುರ ನಡುವೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.

