ಹೊಸನಗರ ; ಇಂದಿನ ಮಕ್ಕಳಿಗೆ ಉನ್ನತವಾದ ಶಿಕ್ಷಣ ನೀಡಿದರಷ್ಟೇ ಸಾಲದು, ವಿದ್ಯೆಯ ಜೊತೆ ಹಿರಿಯ ಕಿರಿಯರ ಹಾಗೂ ಕುಟುಂಬದವರೊಂದಿಗೆ ಅನ್ಯೋನ್ಯ ಬಾಂಧವ್ಯ, ನಮ್ಮ ನೆಲ ಜಲ ಪರಿಸರದ ಕುರಿತ ಪ್ರಾಪಂಚಿಕ ಜ್ಞಾನವೂ ಅತೀ ಮುಖ್ಯವಾಗಿದೆ ಎಂದು ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ನಗರ ಹೋಬಳಿ ಘಟಕ, ಸುರಭಿ ಸ್ವ ಸಹಾಯ ಸಂಘ ನಗರ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಸಾಹಿತ್ಯಾಸಕ್ತ ಬಳಗದವರ ಸಹಯೋಗದಲ್ಲಿ ನಗರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಮಕ್ಕಳ ಶಿಬಿರ ಕಾರಂಜಿಯ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳು ಅತ್ಯಂತ ಬುದ್ದಿವಂತರೂ ಸುಶಿಕ್ಷಿತರೂ ಹೌದು ಆದರೆ ಪುಸ್ತಕದ ಅಂಕಗಳು ಹೊರೆತು ಪಡಿಸಿದರೆ ಸಾಮಾಜಿಕ ಕೌಟುಂಬಿಕ ಬಾಂಧವ್ಯಗಳ ಅರಿವು ಸಹ ಸಿಗಬೇಕಿದೆ, ಮಕ್ಕಳಿಗೆ ಪುಸ್ತಕದ ಪಾಠದ ಜೊತೆ ವಾಸ್ತವಿಕವಾದ ಜೀವನಾನುಭವವೂ ಬೇಕಾಗಿದೆ ಈ ನಿಟ್ಟಿನಲ್ಲಿ ಮುಂದಿನ ವಿದ್ಯಾರ್ಥಿಗಳಿಗೆ ನಾವೆಲ್ಲರು ಮಾರ್ಗದರ್ಶನ ನೀಡಬೇಕಿದೆ ಎಂದರು.

ಉಡುಪಿ ತಾಲೂಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಹೆಚ್.ಪಿ.ರವಿರಾಜ್ ಮಾತನಾಡಿ, ಮಲೆನಾಡಿನ ಹಸಿರಿನ ಪರಿಸರದ ನಡುವೆ ಇಂತಹ ಬಿರು ಬೇಸಿಗೆಯಲ್ಲೂ ಇಲ್ಲಿ ತಂಪು ಇದ್ದು ಬಿದನೂರು ಕೋಟೆ, ಬರೆಕಲ್ ಬತ್ತೇರಿಯ ನೋಟಗಳಿರುವ ಹಸಿರಿನ ಹೊರ ಪರಿಸರದಲ್ಲಿ ಶಿಬಿರ ಆಯೋಜಿಸಿರುವುದರ ಕುರಿತು ಶುಭ ಹಾರೈಸಿದರು. ಹಾಗೆಯೇ ಗ್ರಾಮೀಣ ಭಾಗದಲ್ಲಿ 7 ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚಿನ ಮಕ್ಕಳಿಗೆ ಸಾಮಾಜಿಕ ಕಳಕಳಿಯ ಮಾಹಿತಿಗಳನ್ನೊಳಗೊಂಡ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ನಗರ ಹೋಬಳಿ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸಿ.ನಾರಾಯಣ ಕಾಮತ್ ವಹಿಸಿದ್ದರು. ಹೊಸನಗರ ತಾಲೂಕು ಕಸಾಪದ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ, ಡಾ.ವೈ.ಕೃಷ್ಣಮೂರ್ತಿ, ಸುರಭಿ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಶಾರದಾ ಗೋಖಲೆ, ಶಿಕ್ಷಕರಾದ ಶಿವಶಂಕರಮಠ, ಪ್ರಹ್ಲಾದ ರಾವ್, ಪ್ರಕಾಶ್, ವಸುಧಾ ಚೈತನ್ಯ, ಶ್ರೀಧರಶೆಟ್ಟಿ, ನೇಮಿರಾಜ್, ಕರಾಟೆ ಶಿಕ್ಷಕ ಹರೀಶ್, ಚಕ್ರವಾಕ ಸುಬ್ರಹ್ಮಣ್ಯ, ಕವಿಗಳಾದ ಎಡ್ವರ್ಡ್ ಡಿಸೋಜ, ಹಿರಿಯ ಸಾಹಿತಿ ಅಂಬ್ರಯ್ಯಮಠ, ಸಾಹಿತಿ ನಿಟ್ಟೂರು ಶಾಂತಾರಾಮಪ್ರಭು, ಬಸಪ್ಪಗೌಡರು ನೂತನ್ ಬೈಸೆ ಶಿಕ್ಷಕಿಯರಾದ ಭಾಗ್ಯಶ್ರೀ, ಲಕ್ಷ್ಮಿ ಸುನಿತಾ ಹಾಗೂ ಪೋಷಕರು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.