ಹೊಸನಗರ : ರೈತರು ಹಾಗೂ ಅಡಿಕೆ ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹10,69,831 ನಿವ್ವಳ ಲಾಭ ದಾಖಲಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ. ರಾಘವೇಂದ್ರ ತಿಳಿಸಿದ್ದಾರೆ.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಆರ್ಥಿಕ ಪ್ರಗತಿ ಹಾಗೂ ರೈತರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಂಸ್ಥೆ ಆರಂಭವಾದಾಗಿನಿಂದಲೂ ನಿರಂತರವಾಗಿ ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಸದಸ್ಯರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ಸಂಘದಲ್ಲಿ 5,926 ಸಕ್ರಿಯ ಸದಸ್ಯರು ಇದ್ದು, ಸದಸ್ಯರಿಗೆ ವಿವಿಧ ಉದ್ದೇಶಗಳಿಗಾಗಿ ಒಟ್ಟು ₹23.85 ಕೋಟಿ ಸಾಲ ಒದಗಿಸಲಾಗಿದೆ ಎಂದು ತಿಳಿಸಿದರು.
ಸಂಘದ ವಿವಿಧ ನಿಧಿಗಳ ರೂಪದಲ್ಲಿ ₹3.27 ಕೋಟಿ ಸಂಗ್ರಹವಿದ್ದು, ಡಿಸಿಸಿ ಬ್ಯಾಂಕ್ನಲ್ಲಿ ಆರ್ಎಫ್ಡಿ ರೂಪದಲ್ಲಿ ₹2.24 ಕೋಟಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ ಸಂಘದಲ್ಲಿ ವಿವಿಧ ರೀತಿಯ ಠೇವಣಿಗಳ ಮೊತ್ತ ₹25.35 ಕೋಟಿ ಆಗಿದ್ದು, ಸದಸ್ಯರಿಂದ ಸಂಗ್ರಹವಾಗಿರುವ ಷೇರು ಬಂಡವಾಳ ₹3.18 ಕೋಟಿ ಇದೆ ಎಂದು ರಾಘವೇಂದ್ರ ವಿವರಿಸಿದರು.
2025-26ನೇ ಸಾಲಿನಲ್ಲಿ ಸಂಘಕ್ಕೆ ಒಟ್ಟು 34,056 ಅಡಿಕೆ ಮೂಟೆಗಳು ಬಂದಿವೆ. ಅಡಿಕೆ ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದ್ದರೂ, ಬೆಳೆಗಾರರು ಸಂಘದೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದ್ದು, ರೈತರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಅದರ ಭಾಗವಾಗಿ ಅಡಿಕೆ ಸೇರಿದಂತೆ ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಹಸಿ ಅಡಿಕೆ ಖರೀದಿ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಯೋಜನೆಗಳ ಯಶಸ್ಸಿಗೆ ಸದಸ್ಯರು ಹಾಗೂ ಸಹಕಾರಿಗಳ ಸಹಭಾಗಿತ್ವ ಅಗತ್ಯ ಎಂದು ಅವರು ಹೇಳಿದರು.
ಸಂಘದ ಸದಸ್ಯರಿಗೆ ಅಡಿಕೆ ಮುಂಗಡ ಸಾಲಕ್ಕೆ 13% ಬಡ್ಡಿದರ, ಬೆಳೆ ಸಾಲಕ್ಕೆ 14% ಬಡ್ಡಿದರ ನಿಗದಿಪಡಿಸಲಾಗಿದೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ 8% ಬಡ್ಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದಲ್ಲದೆ, ಕೃಷಿ ಅಪಘಾತ ಪರಿಹಾರ ಯೋಜನೆಯಡಿ ಪಹಣಿ ಹೊಂದಿರುವ ಸದಸ್ಯರ ತೋಟದಲ್ಲಿ ಯಜಮಾನ ಅಥವಾ ಗೊನೆಗಾರರಿಗೆ ಅಪಘಾತ ಸಂಭವಿಸಿದಲ್ಲಿ, ವೈದ್ಯಕೀಯ ವೆಚ್ಚಕ್ಕಾಗಿ ಗರಿಷ್ಠ ₹50 ಸಾವಿರದವರೆಗೆ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ಸಭೆಯ ವೇಳೆ ಹೊಸನಗರ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಜಯೇಂದ್ರ, ಉಪಾಧ್ಯಕ್ಷ ವಸವೆ ಈಶ್ವರಪ್ಪ ಗೌಡ, ನಿರ್ದೇಶಕರಾದ ಎಂ.ಜಿ. ರಾಮಚಂದ್ರ, ಹನಿಯಾ ಹೆಚ್.ಜಿ. ರವಿ, ಜಗದೀಶ ಹೆಚ್.ಪಿ., ಬಿ.ಸಿ. ಆದಿತ್ಯ, ಕೆ.ಎನ್. ಕೃಷ್ಣಮೂರ್ತಿ, ರಾಜಶೇಖರ ಗಣಪತಿ ಡಿ.ಆರ್., ವಿದ್ಯಾ ಪೈ, ಪ್ರತಿಭಾ ಭಟ್, ಸುಮುಖ, ಸುಮನ್, ಶಿವಪ್ರಕಾಶ್, ಗುರುಪ್ರಸಾದ್, ಸಿಂಧೂ, ಮಧು, ಪ್ರದೀಪ್, ಮನೋಜ್, ಕಿರಣ್, ಅಕ್ಷಯ್ ಕುಮಾರ್, ಸುರೇಶ್, ವಿಜೇಂದ್ರ ಪಂಡಿತ್, ರಾಜಶೇಖರ, ಪ್ರೀನ್ಸಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

