ಹೊಸನಗರ : ತಮಗೆ ಮಂಜೂರಾದ ಜಮೀನಿನ ಪಕ್ಕಾಪೋಡಿ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ರೈತನೊಬ್ಬ ಮಂಗಳವಾರ ಏಕಾಂಗಿಯಾಗಿ ತಾಲ್ಲೂಕು ಕಚೇರಿ ಪಡಸಾಲೆಯಲ್ಲಿ ಧರಣಿ ನಡೆಸಿ ಗಮನ ಸೆಳೆದರು.
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಎಲ್.ಗುಡ್ಡೆಕೊಪ್ಪ ನಿವಾಸಿ ರೈತ ರಾಮನಾಯ್ಕ ಅವರು ತಮ್ಮ ಜಮೀನಿಗೆ ಸಂಬಂಧಿಸಿದ ಕಚೇರಿ ಕೆಲಸಗಳು ಆಗುತ್ತಿಲ್ಲ. ವರ್ಷಗಟ್ಟಲೇ ಇಲಾಖೆ ಅಲೆದು ಸಾಕಾಗಿದೆ ಎಂದು ಆರೋಪಿಸಿ ಕಚೇರಿಯಲ್ಲಿ ಧರಣಿ ಕುಳಿತರು.
ತಮ್ಮ ಕುಟುಂಬಕ್ಕೆ ಸುಮಾರು 50 ವರ್ಷಗಳ ಹಿಂದೆ 4 ಎಕರೆ ಸಾಗುವಳಿ ಜಮೀನು ಮಂಜೂರು ಆಗಿದೆ. ಪಕ್ಕಾಪೋಡಿ ಆಗಬೇಕಾಗಿದೆ. ಅರಣ್ಯ ಇಲಾಖೆಯ ಅಭಿಪ್ರಾಯದ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಇಲಾಖೆಯಲ್ಲಿ ಕೇಳಿದರೂ ಸೂಕ್ತ ಉತ್ತರ ನೀಡುತ್ತಿಲ್ಲ. ಹತ್ತಾರು ವರ್ಷಗಳಿಂದ ಇಲಾಖೆ ಅಲೆದು ಅಲೆದು ಸಾಕಾಗಿದೆ. ತಾಲ್ಲೂಕು ಕಚೇರಿಯಲ್ಲಿ ಬಡ ರೈತರ ಸಮಸ್ಯೆ ಕೇಳುವವರಿಲ್ಲ ಎಂದು ದೂರಿದರು.
ಇಲಾಖೆ ಆವರಣದಲ್ಲಿ ರೈತ ಧರಣಿ ಕುಳಿತ ವಿಷಯ ಶಾಸಕ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ಬಂದಿದ್ದು ಅವರು ಸೂಚನೆ ಮೇರೆಗೆ ತಹಸೀಲ್ದಾರ್ ಭರತ್ ರಾಜ್ ಧರಣಿ ನಿರತ ರೈತ ರಾಮನಾಯ್ಕ ಅವರನ್ನು ಮನವೊಲಿಸಿದ್ದಾರೆ. ಅಧಿಕಾರಿಗಳ ಭರವಸೆ ಮೇರೆಗೆ ಧರಣಿ ಹಿಂದಕ್ಕೆ ಪಡೆಯಲಾಗಿದೆ.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ, ಜಿ.ಪಂ. ಮಾಜಿ ಸದಸ್ಯ ಉಮೇಶ್ ಹೊಸನಗರ, ತ.ಮ. ನರಸಿಂಹ ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





