ರಿಪ್ಪನ್ಪೇಟೆ ; ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಂದ ಬಡ ಜನ ಅಭಿವೃದ್ದಿ ಹೊಂದುತ್ತಿದ್ದಾರೆ, ಇದು ಅಭಿವೃದ್ದಿಯಲ್ಲವೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಸುಮಾರು 17 ಎಕರೆ ವಿಸ್ತೀರ್ಣದ ಆನೆಕರೆ ಹೂಳೆತ್ತುವ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವುದರೊಂದಿಗೆ ಕೆರೆಯ ಅಭಿವೃದ್ದಿಯೊಂದಿಗೆ ಅಂತರ್ಜಲ ಹೆಚ್ಚಿಸುವ ಮೂಲಕ ಕೆರೆಯ ಕೆಳಗಿನ ಸುಮಾರು 100 ಎಕರೆ ಅಚ್ಚುಕಟ್ಟು ರೈತರ ಭೂಮಿಗೆ ನೀರು ಹರಿಸುವುದರೊಂದಿಗೆ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಹಾಗೂ ಬೇಸಿಗೆಯಲ್ಲಿ ಇತರ ಬೆಳೆಗಳಿಗೆ ನೀರು ಹರಿಸಲು ಸಹಕಾರಿಯಾಗುವುದೆಂದು ಹೇಳಿ, ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆ ಹೂಳೆತ್ತಲು ಈಗಿನ ಸರ್ಕಾರ 18 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದು ಅದರಂತೆ ಹೊಸನಗರ ಸಾಗರ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಗೆ ಸೇರಲಾಗಿರುವ ಕೆರೆಗಳ ಅಭಿವೃದ್ದಿಗೆ ಅನುದಾನವನ್ನು ನೀಡಲಾಗಿದೆ ಎಂದು ವಿವರಿಸಿದ ಅವರು, ಆನೆಕೆರೆಯನ್ನು ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದಾರೆಂದು ಶಾಸಕರ ಬಳಿ ಗ್ರಾಮಸ್ಥರು ನೀಡಿದ ದೂರಿಗೆ ಕೂಡಲೇ ಸ್ಪಂದಿಸಿ ತಹಸೀಲ್ದಾರ್ ರಶ್ಮಿ ರವರಿಗೆ ಕೂಡಲೇ ಕೆರೆ ಒತ್ತುವರಿದಾರರನ್ನು ತೆರವುಗೊಳಿಸಿ ಕೆರೆಯ ಅಭಿವೃದ್ದಿಗೆ ಸಹಕರಿಸುವಂತೆ ಸೂಚಿಸಿ, ಅಡ್ಡಿ ಮಾಡಿದರೆ ಆಂತಹವರ ವಿರುದ್ದ ಠಾಣೆಗೆ ದೂರು ನೀಡಿ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಪಿಎಸ್ಐ ಗೆ ಸೂಚಿಸಿದರು.
ಕುಡಿಯುವ ನೀರಿನ ಯೋಜನೆ ಕಾಮಗಾರಿ ಶೀಘ್ರ ಮುಗಿಸಲು ಸೂಚನೆ ;
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜೆಜೆಎಂ ಕಾಮಗಾರಿ ಬರುವ ಡಿಸೆಂಬರ್ ಅಂತ್ಯದೊಳಗೆ ಮುಗಿಸಿ ಗ್ರಾಮೀಣ ಜನರಿಗೆ ಶುದ್ದ ಕುಡಿಯುವ ನೀರು ದೊರೆಯುವಂತೆ ಮಾಡಲು ಗುತ್ತಿಗೆ ದಾರರಿಗೆ ಖಡಕ್ ಎಚ್ಚರಿಕೆ ನೀಡಿದ ಅವರು, ಚಕ್ರಾನಗರದಿಂದ ಕಸಬಾ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 500 ಕೋಟಿ ರೂ. ವೆಚ್ಚದ ಜೆಜೆಎಂ ಯೋಜನೆ ಜಾರಿಗೊಳಿಸಲಾಗಿದ್ದು ಕಾಮಗಾರಿ ಸಹ ಭರದಿಂದ ಸಾಗಿದೆ ಎಂದು ಹೇಳಿದರು.
ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಚಂದ್ರಪ್ಪ, ತಹಸೀಲ್ದಾರ್ ರಶ್ಮಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಸತೀಶ್, ಬಾಳೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಜುಗೌಡ, ದಿವಾಕರ, ಶಿವಮ್ಮ, ಲೀಲಾವತಿ, ಪಾರ್ವತಮ್ಮ, ರೇಖಾ, ಶಶಿಕಲಾ, ಬಾಳೂರು ಘಟಕದ ಕಾಂಗ್ರೆಸ್ ಅಧ್ಯಕ್ಷ ಸಂತೋಷ (ಚಿಂಟು), ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ನೆವಟೂರು, ಆನೆಕೆರೆ, ಬಾಳೂರು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.