ಹೊಸನಗರ ; ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣರ ಹುಟ್ಟು ಹಬ್ಬವನ್ನು ವೈಶಿಷ್ಟ್ಯ ಪೂರ್ಣವಾಗಿ ಶನಿವಾರ ರಾತ್ರಿ ಹೊಸನಗರದ ನೆಹರು ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಬೇಳೂರು ಅಭಿಮಾನಿ ಬಳಗದವರು ಆಚರಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಮೈದಾನದ ತುಂಬಾ ಜನ ಸಾಗರವೇ ಸೇರಿದ್ದು ಬೇಳೂರು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಕಿಕ್ಕಿರಿದು ತುಂಬಿದ ಜನಸ್ತೋಮದ ಈ ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿದ ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ನಮ್ಮ ಅಖಂಡ ಭಾರತ ದೇಶವನ್ನು ನಮ್ಮ ಸೈನಿಕರು ಕಾಯುವುದರ ಜೊತೆಗೆ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದಾರೆ. ನಾನು ಮೂರು ಬಾರಿ ಶಾಸಕರಾಗಿ ಯಾರ ಮನಸ್ಸಿಗೂ ನೋವಾಗುವ ರೀತಿಯಲ್ಲಿ ನಡೆದುಕೊಳ್ಳದೇ ಜನ ಸೇವಕನಾಗಿ ಸೇವೆ ಮಾಡುತ್ತಿರುವುದಕ್ಕೆ ಈ ಜನಸಮೂಹವೇ ಸಾಕ್ಷಿ. ನನ್ನ ರಾಜಕೀಯ ಜೀವನವನ್ನು ಬಡವರ ಶ್ರೀ ಸಾಮಾನ್ಯರ ಸೇವೆಗಾಗಿ ಮುಡಿಪಾಗಿಡುತ್ತೇನೆ. ನಿಮ್ಮ ದಿನ ನಿತ್ಯದ ಸೇವೆ ಮಾಡುವ ಭಾಗ್ಯ ದೇವರು ನನಗೆ ಕಲ್ಪಿಸಿದ್ದು ಅದಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳುತ್ತೇನೆ. ನಿಮಗೆ ಏನೆ ತೊಂದರೆಯಾಗಿದ್ದರೂ ನಮ್ಮ ಮನೆಯ ಬಾಗಿಲು ತೆರದಿರುತ್ತದೆ. ಯಾವುದೇ ಮಧ್ಯವರ್ತಿಗಳ ಸಹಾಯ ಪಡೆಯದೇ ನೇರವಾಗಿ ನಮ್ಮ ಮನೆಗೆ ಬನ್ನಿ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಅಪ್ಪಾಜಿಯವರ ಕನಸಿನ ಕೂಸಿನಂತಿದ್ದು ಅವರ ಆಸೆ ಆಕಾಂಕ್ಷಿಗಳನ್ನು ಪೂರೈಸುವ ನಿಟ್ಟಿನಲ್ಲಿ ತೊಡಗಿದ ಪರಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಹುಟ್ಟು ಹಬ್ಬಕ್ಕೆ ಶುಭ ಕೋರಿದರು.
ಸಚಿವರಾದ ಸಂತೋಷ್ ಲಾಡ್, ಸಿನಿಮಾ ನಟರಾದ, ರವಿಶಂಕರ್, ವಿರಾಟ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಾಸಕಿ ಬಲ್ಕೀಶ್ ಬಾನು, ಇನ್ನೂ ಮುಂತಾದವರು ಭಾಗವಹಿಸಿ ಬೇಳೂರು ಗೋಪಾಲಕೃಷ್ಣರಿಗೆ ಶುಭಾಶಯ ಕೋರಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸುಮಾರು 10 ಗಂಟೆಗೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ಜನ್ಯ, ಕಿರುತೆರೆ ನಿರೂಪಕಿ ಅನುಶ್ರೀ ತಂಡ ಮನರಂಜನಾ ಕಾರ್ಯಕ್ರಮ ನಡೆಸಿ ನೆಹರು ಮೈದಾನದಲ್ಲಿ ಕಿಕ್ಕಿರಿದು ತುಂಬಿದ ಜನ ಸಾಗರದ ಜನರನ್ನು ರಂಜಿಸಿದರು. ಈ ವೇಳೆ ಬೇಳೂರು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ಅರ್ಜುನ್ ಜನ್ಯರೊಂದಿಗೆ ಹೆಜ್ಜೆ ಹಾಕಿ ನೆರೆದಿದ್ದ ಜನ ಸಾಗರವನ್ನು ಭ್ರಮಾಲೋಕದಲ್ಲಿ ಮುಳುಗಿಸಿದರು.

ರಾಮನಗರದ ಚಿರಾಗ್ ಅವರಿಂದ ಸ್ಟಂಟ್ಡ್ಯಾನ್ಸ್ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹೊಸನಗರದಲ್ಲಿ ಮೊದಲ ಬಾರಿಗೆ ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದ್ದು ಇತಿಹಾಸ ನಿರ್ಮಿಸಿತು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಆಚರಣಾ ಸಮಿತಿ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಮಣ್ಯ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಪ್ರಮುಖರಾದ ಎಂ.ಪಿ.ಸುರೇಶ, ಸಣ್ಣಕ್ಕಿ ಮಂಜುನಾಥ್, ಬಸವರಾಜ್ ಗಗ್ಗ, ಬಾವಿಕಟ್ಟೆ ಸತೀಶ್, ಸಂತೋಷ್, ಶ್ರೀನಿವಾಸ್ ಕಾಮತ್ ಮತ್ತಿತರರು ಇದ್ದರು.
ಜನರನ್ನು ನಿಯಂತ್ರಕ್ಕೆ ಪೊಲೀಸರ ಹರಸಾಹಸ :
ಎರಡು ದಿನಗಳಿಂದ ಹೊಸನಗರದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಸಬ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ್ರವರ ನೇತೃತ್ವದಲ್ಲಿ ಕಿಕ್ಕಿರಿದು ತುಂಬಿದ ಜನ ಸಾಗರವನ್ನು ನಿಯಂತ್ರಿಸಲು ಹರಸಾಹಸ ಮಾಡುವುದರ ಜೊತೆಗೆ ಎಲ್ಲಿಯೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಸಹಕರಿಸಿದ ಪೊಲೀಸ್ ಇಲಾಖೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿನಂದಿಸಿದರು.

ಬೇಳೂರು ಅಭಿಮಾನಿ ಬಳಗದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಮಣ್ಯ ಸ್ವಾಗತಿಸಿ ಅಭಿಮಾನಿ ಬಳಗದ ಪರವಾಗಿ ಶಾಸಕರಿಗೆ ಬೆಳ್ಳಿ ಗದೆ ನೀಡಿ ಹುಟ್ಟು ಹಬ್ಬದ ಶುಭ ಕೋರಿದರು. ನಂದಿನಿ ಸಾಗರ್ ಸಮನ್ವಯ ಕಾಶಿ ನಟರಾಜ್ ಕಾರ್ಯಕ್ರಮ ನಿರೂಪಿಸಿದರು.