ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ನೌಕರರ ವರ್ಗಾವಣೆ ಹಾಗೂ ಸರ್ಕಾರಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಘುನಾಥ್ ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿಂದ ತಾನು ಸಚಿವರ ಆಪ್ತ ಸಹಾಯಕ (ಪಿ.ಎ.) ಎಂದು ಹೇಳಿಕೊಂಡು ಹಲವು ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ ಎಂಬ ಆರೋಪವಿದೆ.
ಈತ ಕಾಂಗ್ರೆಸ್ನ ಎನ್.ಎಸ್.ಯು.ಐ.ನ ಮುಖಂಡ ಎಂದು ಹೇಳಿಕೊಂಡಿದ್ದಾನೆ, ಕಾಂಗ್ರೆಸ್ ಮೂಲಗಳ ಪ್ರಕಾರ ಈತನಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ಮೊದಲ ಬಾರಿಗೆ ಈತನ ಚಟುವಟಿಕೆ ಬಗ್ಗೆ ಸಚಿವರ ವಿಶೇಷ ಅಧಿಕಾರಿ ಶ್ರೀಪತಿ ಅವರಿಗೆ ಮಾಹಿತಿ ಸಿಕ್ಕಿದೆ.
ಈ ನಡುವೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಭಾರತಿ ಅವರಿಗೆ ಕರೆಮಾಡಿ, “ನಿಮ್ಮ ವರ್ಗಾವಣೆ ಆಗಿದೆ, ಪ್ಲೇಸ್ ತೋರಿಸಿಲ್ಲ. ನಾನು ಸಚಿವರೊಂದಿಗೆ ಮಾತನಾಡಿ ನಿಮ್ಮ ಕೆಲಸ ಮಾಡಿಸುತ್ತೇನೆ” ಎಂದು ಹೇಳಿದ್ದ. ಇದರಿಂದ ಅನುಮಾನಗೊಂಡ ಭಾರತಿ ಅವರು ವಿಚಾರಣೆ ನಡೆಸಿ, ‘ಟ್ರೂಕಾಲರ್’ ಮೂಲಕ ಪರಿಶೀಲಿಸಿದಾಗ, ಈತ ನಿಜವಾದ ಪಿ.ಎ. ಅಲ್ಲ ಎಂಬುದು ಬಹಿರಂಗವಾಗಿದೆ.
ಅನಂತರ ಕಾಂಗ್ರೆಸ್ ಮುಖಂಡ ಗಿರೀಶ್ ಅವರ ಮೂಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ರಘುನಾಥ್ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಸದ್ಯ ಈತನ ವಿರುದ್ಧ ಇನ್ನಷ್ಟು ತನಿಖೆ ಮುಂದುವರಿಯುತ್ತಿದ್ದು, ಪೊಲೀಸರಿಗೆ ಆರೋಪಿಯ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಅನುಮಾನ ವ್ಯಕ್ತವಾಗಿದೆ.