ಸಾಗರ ; ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ಕಳ್ಳತನ ಮಾಡಿದಂತ ಕಳ್ಳ, ಕದ್ದ ಚಿನ್ನಾಭರಣ ಖರೀದಿಸಿದ ವ್ಯಕ್ತಿಯನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಗಳನ್ನು ಬೇಧಿಸಿ ಆರೋಪಿ ಪತ್ತೆಗಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಅವರು ಸೂಚಿಸಿದ್ದರು ಎಂದರು.
ಎಸ್ಪಿ ಸೂಚನೆಯಂತೆ ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ, ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಯುವರಾಜ್.ಕೆ, ಸಿಬ್ಬಂದಿಗಳಾದಂತ ಅಶೋಕ್, ಪರಶುರಾಮ, ಉಮೇಶ್ ಲಮಾಣಿ, ಸಂತೋಷ್ ಕುಮಾರ್, ನೂತನ್, ನಿರಂತನ್, ಸುಬ್ರಹ್ಮಣ್ಯ ಎಸ್, ಭರತ್ ಕುಮಾರ್, ಚಾಲಕ ನರಸಿಂಹಸ್ವಾಮಿ, ಸತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದರು.
ರಿಪ್ಪನ್ಪೇಟೆ ಠಾಣೆ ವ್ಯಾಪ್ತಿಯ ಕೋಡೂರು, ದೂನ, ನೆವಟೂರು ಸೇರಿದಂತೆ ಐದು ಮನೆ ಕಳ್ಳತನ ಹಾಗೂ ಆನಂದಪುರ ಠಾಣೆ ವ್ಯಾಪ್ತಿಯ ನಾಲ್ಕು ಪ್ರಕರಣದ ಸೇರಿ ಈ ತಂಡವು 12 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಂತ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾ.ಪಂ ವ್ಯಾಪ್ತಿಯ ಬಸವಾಪುರ ಗ್ರಾಮದ ಅಶೋಕ್ ಕೆ. ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈ ಮನೆಗಳ್ಳನಿಂದ ಚಿನ್ನಾಭರಣ ಖರೀದಿಸಿದ ಕಾರಣಕ್ಕಾಗಿ ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಚಿನ್ನ-ಬೆಳ್ಳಿ ತಯಾರಿಕೆ ಕೆಲಸ ಮಾಡುತ್ತಿದ್ದಂತ ಚಂದ್ರಹಾಸ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಇಬ್ಬರು ಆರೋಪಿಗಳ ಬಂಧನದಿಂದಾಗಿ ಆನಂದಪುರ ಠಾಣೆಯಲ್ಲಿ ದಾಖಲಾಗಿದ್ದಂತ ನಾಲ್ಕು ಅಪರಾಧ ಪ್ರಕರಣ, ರಿಪ್ಪನ್ಪೇಟೆ ಠಾಣೆಯಲ್ಲಿ ದಾಖಲಾಗಿದ್ದಂತ 5, ಹೊಸನಗರ ಪೊಲೀಸ್ ಠಾಣೆಯ ಒಂದು ಕೇಸ್, ಮಾಳೂರು ಪೊಲೀಸ್ ಠಾಣೆಯ 1 ಕೇಸ್ ಹಾಗೂ ಸಾಗರ ಪೇಟೆ ಠಾಣೆಯ 1 ಕೇಸ್ ಸೇರಿದಂತೆ ಒಟ್ಟು 12 ಕೇಸ್ ಬೇಧಿಸಿದಂತಾಗಿದೆ ಎಂದರು.
ಬಂಧಿತ ಆರೋಪಿಗಳಿಂದ 387 ಗ್ರಾಂ ಚಿನ್ನ, 384 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದಂತ 2 ಬೈಕ್ ಸಹಿತ ಸುಮಾರು 32,23,688 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದರು.