HOSANAGARA | ಅರಣ್ಯ, ಸರ್ಕಾರಿ ಭೂಮಿ ಸಾಗುವಳಿ ತೆರವು ಕಾರ್ಯ ವಿರೋಧಿಸಿ ಸೆ.21 ರಂದು ಜನಾಂದೋಲನ ಜಾಗೃತಿ ಪ್ರತಿಭಟನಾ ಸಭೆ ; ಗಣೇಶ್ ಬೆಳ್ಳಿ

Written by malnadtimes.com

Published on:

HOSANAGARA ; ಮಲೆನಾಡಿನಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಬಗೆಹರಿಸದೇ ಬೆಂಗಳೂರಿನ ಅರಣ್ಯ ಭವನದಲ್ಲಿ ಕುಳಿತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಸ್ಥಳೀಯವಾಗಿ ವಾಸಿಸುತ್ತಿರುವ ಜನರ ಮನೆ, ಸಾಗುವಳಿ ಭೂಮಿಯನ್ನು ಸೇರಿಸಿ ಅರಣ್ಯ ಎಂದು ದಾಖಲು ಮಾಡಿಕೊಂಡು 1916 ರಿಂದ ಮಾಡಿದ ನೋಟಿಫಿಕೇಶನ್‌ಗಳನ್ನು ಈಗ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಸೆ. 21ರ ಶನಿವಾರ ಹೊಸನಗರ ತಾಲ್ಲೂಕು ಕಛೇರಿ ಮುಂಭಾಗ ತಾಲ್ಲೂಕಿನ ರೈತರು ಸಭೆ ಸೇರಿ ತಮ್ಮ ಬದುಕಿನ ಹಕ್ಕಿಗಾಗಿ ಹೋರಾಟ ಹಮ್ಮಿಕೊಂಡಿರುತ್ತಾರೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಗಣೇಶ್‌ ಬೆಳ್ಳಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಈ ಸಭೆಗೆ ಎಲ್ಲಾ ಪಕ್ಷದ ಮುಖಂಡರನ್ನು, ಜನಪರ ಹೋರಾಟಗಾರರನ್ನು ಕರೆಯಲಾಗಿದೆ. ಆಳುವ ಸರ್ಕಾರಗಳು ಜನವಿರೋಧಿ ನಿಲುವುಗಳನ್ನು ತೆಗೆದುಕೊಂಡಾಗ ಅದನ್ನು ವಿರೋಧಿಸುವುದು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದರು.

ಮಲೆನಾಡಿನಲ್ಲಿ ಸರ್ಕಾರಗಳೇ ಮಾಡಿದ ಅಣೆಕಟ್ಟಿನಿಂದ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ಮತ್ತು ಜನರ ಸಾಗುವಳಿ ಭೂಮಿ, ಮನೆಗಳು ಮುಳುಗುಡೆಯಾಗಿದ್ದು ಅದನ್ನು ಸರ್ಕಾರ ಗಮನಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಕೆಲವರು ಪರಿಸರವಾದದ ಹೆಸರಿನಲ್ಲಿ ಪದೇಪದೇ ಕೋರ್ಟ್‌ಗೆ ಹೋಗುತ್ತಿರುವುದನ್ನು ಎದುರಿಸಲು ಮಲೆನಾಡಿನ ಜನರು ಸಂಘಟಿತರಾಗಬೇಕಾಗಿದೆ. 3 ಎಕರೆಗಿಂತ ಹೆಚ್ಚಿನ ಒತ್ತುವರಿಯನ್ನು ತೆರವುಮಾಡುತ್ತೇವೆ ಎನ್ನುವ ಸರ್ಕಾರ ನಿರ್ಧಾರ ರೈತರನ್ನು ಇಬ್ಬಾಗ ಮಾಡುವ ತಂತ್ರವಾಗಿದ್ದು, ಜನಸಂಗ್ರಾಮ ಪರಿಷತ್ 3 ಎಕರೆ ಒಳಗಿನ ರೈತರನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಹೋಗಲು ಸಿದ್ಧವಾಗಿದೆ. ಇದನ್ನು ವಿರೋಧಿಸುತ್ತಾ ನಾವು ನಮ್ಮ ಬದುಕಿನ ಹಕ್ಕನ್ನು ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಲು ಸಿದ್ಧರಾಗಬೇಕಾಗಿದೆ. ತಾಲ್ಲೂಕಿನ ಎಲ್ಲಾ ಅರಣ್ಯ ಹಕ್ಕು ಸಮಿತಿಯ, ಅಧ್ಯಕ್ಷರು ಕಾರ್ಯದರ್ಶಿಗಳು, ಸದಸ್ಯರುಗಳು ಪ್ರತೀ ಗ್ರಾಮದಲ್ಲಿದ್ದು ಸಮಿತಿಗಳಿಗೆ ಶಕ್ತಿ ತುಂಬಿ ಜನ ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ. ಸರ್ಕಾರದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವೆ ಮಾಹಿತಿ ವಿನಿಮಯವಿಲ್ಲದೇ ಆಗಿರುವ ತಪ್ಪುಗಳನ್ನು ಸರಿಪಡಿಸಿ ಗ್ರಾಮವಾರು ಪುನರ್ ಸರ್ವೆ ನಡೆಸಿ ರೈತರ ಸಾಗುವಳಿಗಳನ್ನು ಬಿಟ್ಟು ಅರಣ್ಯದ ಘೋಷಣೆಯಾಗಬೇಕಾಗಿದೆ.

ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ ಉಂಟಾಗಲು ಇಲ್ಲಿನ ಅಣೆಕಟ್ಟುಗಳ ಮುಳುಗಡೆಯಾದ ರೈತರು ಕಳೆದುಕೊಂಡ ಭೂಮಿ ಮತ್ತು ಸರ್ಕಾರಗಳೇ ಕಾರಣವಾಗಿದೆ. ಅಣೆಕಟ್ಟುಗಳಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಮುಳುಗಡೆಯಾಗಿದ್ದು, ಅದನ್ನು ಪರಿಗಣಿಸದೇ ಮಲೆನಾಡಿನ ರೈತರ ಮೇಲೆ ತೂಗುಕತ್ತಿಯಾಗಿರುವ ಎಲ್ಲಾ ಕಾನೂನುಗಳಿಗೂ ತಿದ್ದುಪಡಿಗಳನ್ನು ಶಾಸನ ಸಭೆಯಲ್ಲಿ ತರಬೇಕೆಂದು ಒತ್ತಾಯಿಸಿ ಜನಾಂದೊಲನ ಜಾಗೃತಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಇದು ಮಲೆನಾಡಿನ ಹೊಸನಗರ ತಾಲ್ಲೂಕಿನ ಪ್ರತಿ ಮನೆ, ಕುಟುಂಬದ ಸಮಸ್ಯೆಯಾಗಿದ್ದು, ಎಲ್ಲರೂ ಭಾಗವಹಿಸಬೇಕೆಂದು ಒಗ್ಗಟ್ಟಿನಲ್ಲಿ ಗೆಲುವು, ಒಂಟಿಯಾದರೆ ತೆರವು ಎನ್ನುವ ಘೋಷಣೆಯೊಂದಿಗೆ ಶನಿವಾರ ಹೊಸನಗರ ತಾಲ್ಲೂಕು ಕಛೇರಿ ಮುಂಭಾಗ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಬ್ಯಾಣದ, ರೈತಸಂಘದ ಅಧ್ಯಕ್ಷ ರವೀಂದ್ರ ಮಾಸ್ತಿಕಟ್ಟೆ, ಶುಶ್ರುತ ಅಡಗೋಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್, ಕುಮಾರ್ ಈ ಸೊನಲೆ, ಜೀವನ್ ಕುಮಾರ್, ನಾಗರಕೊಡಿಗೆ, ಶ್ರೀಕಾಂತ ಐತಾಳ್, ಮುಂತಾದವರು ಭಾಗವಹಿಸಿದ್ದರು.

Leave a Comment