ಹೊಸನಗರ ; ಪಟ್ಟಣದ 8ನೇ ವಾರ್ಡ್ಗೆ ಸೇರಿದ, ಸುಮಾರು 500 ವರ್ಷಗಳಿಂದ ನಮ್ಮ ಪೂರ್ವಿಕರು ಬಳಸಿಕೊಂಡು ಬಂದ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಇತ್ತೀಚೆಗೆ ಕೆಲವರು ಅಕ್ರಮವಾಗಿ ವಾಸದ ಮನೆಗಳನ್ನು ಕಟ್ಟಿ ರುದ್ರಭೂಮಿ ಜಾಗ ಕಬಳಿಸಲು ಮುಂದಾಗಿದ್ದಾರೆ.
ದಿನದಿಂದ ದಿನಕ್ಕೆ ಜಾಗ ಅಕ್ರಮ ಒತ್ತುವರಿ ಮಾಡುತ್ತಿದ್ದಾರೆ. ಇದರಿಂದ ಸಾವು ಸಂಭವಿಸಿದ ವೇಳೆ ಹಿಂದೂ ಪದ್ದತಿಯ ಪ್ರಕಾರ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಕಾರ್ಯ ನಡೆಸಲು ಭಾರೀ ತೊಂದರೆ ಆಗುತ್ತಿದೆ. ಇದು ಕೆಪಿಸಿಗೆ ಸೇರಿದ ಜಾಗವಾಗಿದ್ದು ಇಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರನ್ನು ಕೂಡಲೇ ತೆರವುಗೊಳಸುವ ಮೂಲಕ ಸ್ಮಶಾನ ಜಾಗ ಅಕ್ರಮ ಒತ್ತುವರಿ ತಡೆಯುವಂತೆ 8 ಮತ್ತು 9ನೇ ವಾರ್ಡ್ನ ಸಾರ್ವಜನಿಕರು ತಾಲೂಕು ಕಚೇರಿ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಸಹಾಯಕ ಮಂಜು ಸಣ್ಣಕ್ಕಿ ಅವರಿಗೆ ಮನವಿ ಪತ್ರ ಸಲ್ಲಿಸಿ ಈ ಕುರಿತು ಶೀಘ್ರ ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಈ ಕುರಿತು ಮನವಿ ಸ್ವೀಕರಿಸಿ ಮಾತನಾಡಿದ, ಮಂಜು ಸಣ್ಣಕ್ಕಿ, ವಿಷಯಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗು ಮುಖ್ಯಾಧಿಕಾರಿ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಚಂದ್ರಕಲಾ, ಮಾಜಿ ಸದಸ್ಯ ಚಂದ್ರಪ್ಪ, ಸತೀಶ್ ಫ್ರೇಂವರ್ಕ್ಸ್, ನಾಗರಾಜ್ ವೆಲ್ಡಿಂಗ್, ರಾಜು ಮೇಸ್ತ್ರಿ, ಅನಂತ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.