ಶಿವಮೊಗ್ಗ ; ಕಾಳಿಂಗಸರ್ಪ ವಿಶ್ವದಲ್ಲಿ ಅಪರೂಪದ ಹಾವಿನ ಪ್ರಭೇದವಾಗಿದ್ದು ಪರಿಸರ ಸ್ನೇಹಿ ಉದ್ದೇಶದಲ್ಲಿ ಸಂಶೋಧನೆ ಅವಶ್ಯಕವಾಗಿದೆ ಎಂದು ಕಾಳಿಂಗ ಸೆಂಟರ್ ಫಾರ್ ಫಾರೆಸ್ಟ್ ಎಕಾಲಜಿ, ಕಾಳಿಂಗ
ಫೌಂಡೇಷನ್ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥ ಗೌರಿಶಂಕರ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಳಿಂಗ ಸರ್ಪ ಕುರಿತು ನಿಯಮಮೀರಿ ಯಾವುದೇ ರೀತಿಯಲ್ಲೂ ಸಂಶೋಧನೆ ಮಾಡಿಲ್ಲ. ಆದರೂ ಸಹ ನಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ
ವ್ಯಕ್ತಪಡಿಸಿದರು.
ಕಾಳಿಂಗ ಸೆಂಟರ್ ಫಾರ್ ಫಾರೆಸ್ಟ್ ಸಂಸ್ಥೆ 13 ವರ್ಷಗಳ ಹಿಂದೆ ಆರಂಭಗೊಂಡಿದೆ. ಕಾಳಿಂಗಸರ್ಪ ಸಂರಕ್ಷಣೆ ಕುರಿತು ವಿಶೇಷ ಮಾಹಿತಿ, ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ಸಂಸ್ಥೆ ವಾಣಿಜ್ಯ ಉದ್ದೇಶದಲ್ಲಿ ಯಾವುದೇ ವಹಿವಾಟು ನಡೆಸಿಲ್ಲ ಎಂದರು.

ಕಾಳಿಂಗ ಸರ್ಪದ ಸಂಶೋಧನೆಯ ಮುನ್ನ ಕೇವಲ ಒಂದು ಬಗೆಯ ಸರ್ಪದ ಬಗ್ಗೆ ಮಾಹಿತಿ ಇತ್ತು. ನಮ್ಮ ಸಂಶೋಧನೆಯ ಮೂಲಕ ನಾಲ್ಕು ಪ್ರಭೇದಗಳನ್ನು ಗುರುತಿಸಿದ್ದೇವೆ. ಪಶ್ಚಿಮಘಟ್ಟದಲ್ಲಿ ನಮಗೆ ಹೊಸ ಪ್ರಬೇಧ ಕಂಡುಬಂತ್ತು. ಆಗುಂಬೆಯಲ್ಲಿ ಎರಡು ಸಂಶೋಧನಾ ಸಂಸ್ಥೆಗಳಿವೆ. ನಾನು 11 ರಾಜ್ಯಗಳಲ್ಲಿ ಕಾಳಿಂಗ ಪ್ರಭೇದಗಳ ಬಗ್ಗೆ ಸಂಶೋಧನೆ ಮಾಡಿದ್ದೇನೆ. ಸಂಶೋಧನೆಗೂ ಮತ್ತು ಸಂರಕ್ಷಣೆಗೂ ಸಂಬಂಧವಿಲ್ಲ. ನಾವು ಸಂಶೋಧನೆಗೂ ಮುನ್ನ ನಮ್ಮ ವಶಕ್ಕೆ ಪಡೆದ ಕಾಳಿಂಗ ಸರ್ಪದ ತೂಕ, ಅಳತೆ ಮತ್ತು ಲೆಕ್ಕವನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ.

2021ರಲ್ಲಿ ಕಳಸ ಅರಣ್ಯ ವ್ಯಾಪ್ತಿಯಲ್ಲಿ ಕಾಳಿಂಗ ಸರ್ಪದ ಗೂಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಮೊಟ್ಟೆಗಳಿದ್ದವು. ಅರಣ್ಯ ಇಲಾಖೆಯ ಬೇಡಿಕೆ ಮೇರೆಗೆ ನಾವು ಮೊಟ್ಟೆಗಳನ್ನು ಸಂರಕ್ಷಿಸಿ ಇನ್ಕ್ಯೂಬೇಟರ್ನಲ್ಲಿ ಮರಿ ಮಾಡಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದೇವು. ಅದು ಹೊರತುಪಡಿಸಿ ನಾವು ಯಾವುದೇ ರೀತಿಯಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿಲ್ಲ ಮತ್ತು ಯಾವುದೇ ರೀತಿಯ ಹಿಂಸೆ ನೀಡಿಲ್ಲ ಎಂದು
ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫೌಂಡೇಷನ್ನ ಕಾನೂನು ಸಲಹೆಗಾರ ಶೌಕದ್ ಜಮಾಲ್, ಸಂಶೋಧಕಿ ಪ್ರಿಯಾಂಕಾ ಸ್ವಾಮಿ ಇದ್ದರು.

