ಹೊಸನಗರ ; ಹೊಸನಗರದಿಂದ ಕೊಲ್ಲೂರು-ಬೈಂದೂರು ಮಾರ್ಗವಾಗಿ ಹೋಗುವ ರಸ್ತೆಗಳಲ್ಲಿ ಭಾರಿ ತೂಕದ ಅಂದರೆ 10 ರಿಂದ 16 ಚಕ್ರದ ಲಾರಿಗಳು ಓಡಾಟ ನಡೆಸುತ್ತಿದ್ದು ಈ ಭಾರಿ ಗಾತ್ರದ ವಾಹನಗಳು ಆಗಾಗೆ ರಸ್ತೆಯ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಬಸ್ಗಳಿಗೆ ಹಾಗೂ ಸಣ್ಣ-ಸಣ್ಣ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆ ಭಾಗದ ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದವರೊಂದಿಗೆ ತೋಡಿಕೊಳ್ಳುತ್ತಿದ್ದಾರೆ.
ಕೊಲ್ಲೂರು ಘಾಟಿಯಲ್ಲಿ ಇತ್ತೀಚೆಗೆ ಸಿಮೆಂಟ್ ತುಂಬಿದ ಲಾರಿಯೊಂದು ಕೆಟ್ಟು ರಸ್ತೆಗೆ ಅಡ್ಡ ನಿಂತು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಕೊಲ್ಲೂರು ಮಾರ್ಗವಾಗಿ ಹೋಗಿ ಬರುತ್ತಿದ್ದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಕ್ತರಿಗೆ ತೊಂದರೆಯಾಗಿದ್ದು ಈ ಸಮಯದಲ್ಲಿ ಮಾತನಾಡಿದ ನಿಟ್ಟೂರು ಅಡಗೋಡಿ, ಮತ್ತಿಮನೆ, ಕೆ.ಬಿ ಸರ್ಕಲ್ ಗ್ರಾಮಸ್ಥರು ಈ ರೀತಿಯ ವಾಹನಗಳು ಓಡಾಟ ನಡೆಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ನಮಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಆಗಾಗ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಅದು ಅಲ್ಲದೇ ಈ ಮಾರ್ಗದಲ್ಲಿ ವಾರಕ್ಕೊಮ್ಮೆ ಒಂದೆರಡು ಅಪಘಾತ ನಡೆಯುತ್ತಿದ್ದು ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಪ್ರಯಾಣಿಕರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ದುರ್ಗಾಂಬಾ ಬಸ್ ಸಂಚರಿಸುತ್ತಿರುವುದರಿಂದ ನಮಗೆಲ್ಲರಿಗೂ ಅನುಕೂಲವಾಗಿದ್ದು ಭಟ್ಕಳ-ಬೆಂಗಳೂರು ಮಾರ್ಗದ ಸರ್ಕಾರಿ ಬಸ್ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅದು ಅಲ್ಲದೇ ಬಂದರೂ ಕೆಲವು ಕಡೆ ಬಸ್ ನಿಲ್ಲಿಸದೆ ಎಕ್ಸ್ಪ್ರೆಸ್ ಹೋಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರುಗಳು ಕೊಲ್ಲೂರು ಮಾರ್ಗದಲ್ಲಿ ಭಾರೀ ಗಾತ್ರದ ವಾಹನಕ್ಕೆ ಕಡಿವಾಣ ಹಾಕಿ ಎಂದು ಆ ಭಾಗದ ಸ್ಥಳೀಯರು ಆಗ್ರಹಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





