ಶರನ್ನವರಾತ್ರಿ ಪರ್ವಾಚರಣೆ – ಚತುರ್ಥ ದಿನ | ನಿರ್ಮಲ ಭಕ್ತಿಯ ಫಲ ಸಮರ್ಪಣೆಯಿಂದ ಪ್ರಕೃತಿಯ ಆರಾಧನೆ ; ಹೊಂಬುಜ ಶ್ರೀ

Written by Mahesha Hindlemane

Published on:

ಹೊಂಬುಜ ; “ಶರನ್ನವರಾತ್ರಿಯ ಪರ್ವವು ಭಾರತೀಯ ಧರ್ಮ ಪರಂಪರೆಯಲ್ಲಿ ವಿಶಿಷ್ಟವಾದುದು. ಪ್ರಕೃತಿಯ ಆರಾಧನೆಯ ಸಂಸ್ಕೃತಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿತ್ತು” ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಪ್ರವಚನದಲ್ಲಿ ಜೈನ ಧರ್ಮ ಪರಂಪರೆಯಲ್ಲಿ ಜಿನವಾಣಿ ಪೂಜೆ ಮತ್ತು ಪ್ರಕೃತಿಯ ಫಲ-ಪುಷ್ಪ ಸಮರ್ಪಣೆಯ ಐತಿಹ್ಯವನ್ನು ವಿವರಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

“ಸಾತ್ವಿಕ ಆಹಾರ ಸೇವನೆಯಿಂದ ಶಾರೀರಿಕ ಮತ್ತು ಮಾನಸಿಕವಾಗಿ ಸಧೃಡವಾಗಿ ಜೀವನೋತ್ಸಾಹವು ಸದಾ ಕರ್ತವ್ಯ ನಿರ್ವಹಿಸಲು ಪ್ರೇರೇಪಿಸುತ್ತದೆ” ಎಂದು ಭಕ್ತರನ್ನು ಆಶೀರ್ವದಿಸಿ, ಶ್ರೀಫಲ ಮಂತ್ರಾಕ್ಷತೆ ನೀಡಿದರು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕವನ್ನು ಶಾಸ್ತ್ರೋಕ್ತವಾಗಿ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಊರ ಪರವೂರ ಭಕ್ತರೊಡಗೂಡಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ತರಲಾಯಿತು.

ಅಭೀಷ್ಠವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿಗೆ ವಿವಿಧ ಫಲಗಳ ಮೂಲಕ ಶೋಭಾಯಮಾನವಾಗಿ ಸಮರ್ಪಿಸಲಾಯಿತು.

ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಹಾಗೂ ನಾಗಸನ್ನಿಧಿಯಲ್ಲಿ ಜಿನಾಗಮೋಕ್ತ ಪೂಜಾ ವಿಧಿಗಳು ನೆರವೇರಿದವು.

ರಾತ್ರಿ ಜಿನಭಜನೆ, ಅಷ್ಟಾವಧಾನ ಮೂಲಕ ಪರಂಪರಾನುಗತ ಉತ್ಸವ, ಪೂಜೆ, ಪ್ರಸಾದ ವಿತರಣೆಯಾಯಿತು. ಜಿನಮಂದಿರ ಸಮುಚ್ಛಯವು ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಶೋಭಿಸಿದವು.

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

Leave a Comment