ಶಿವಮೊಗ್ಗ: ಹೊಳೇಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂಪಿಸಿರುವ ‘ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್’ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದೆ.
ಯೋಜನೆಯಿಂದ ರೈತರ ಕೃಷಿ ಭೂಮಿಗೆ ಹಾನಿಯಾಗುವ ಆತಂಕ ವ್ಯಕ್ತಪಡಿಸಿರುವ ರೈತರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಧಿಕೃತ ಆಕ್ಷೇಪಣೆ ಮನವಿ ಸಲ್ಲಿಸಿದರು.
ಅಧಿಸೂಚನೆ ಹೊರಬಿದ್ದು ತಿಂಗಳು ಕಳೆದರೂ, ಯಾವ ಗ್ರಾಮದಲ್ಲಿ, ಯಾವ ಸರ್ವೇ ನಂಬರ್ ಮೂಲಕ ರಸ್ತೆ ಹಾದುಹೋಗಲಿದೆ ಎಂಬ ಸ್ಪಷ್ಟ ಮಾಹಿತಿಯನ್ನು ರೈತರಿಗೆ ನೀಡಲಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಾಲಿ ಇರುವ ರಸ್ತೆ, ಕೆರೆ, ಗುಡ್ಡ, ಹಳ್ಳ-ಕೊಳ್ಳಗಳನ್ನು ಪರಿಗಣಿಸದೇ ಅವೈಜ್ಞಾನಿಕವಾಗಿ ರಸ್ತೆ ಯೋಜನೆ ರೂಪಿಸಲಾಗಿದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜೀವನಾಧಾರವಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ರೈತರು ಕಳವಳ ವ್ಯಕ್ತಪಡಿಸಿದರು.
ಭೂಮಿ ಕಳೆದುಕೊಳ್ಳುವ ಪ್ರತಿಯೊಬ್ಬ ರೈತರಿಗೂ ನೋಟಿಸ್ ನೀಡಬೇಕು. ಅವರ ಅಭಿಪ್ರಾಯ ಪಡೆದು ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ರೈತರ ಹಿತದೃಷ್ಟಿಯಿಂದ ಈ ಅವೈಜ್ಞಾನಿಕ ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್ ಅನ್ನು ತಕ್ಷಣ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

