ಶಿವಮೊಗ್ಗ: ನಗರದ ಆರ್.ಎಂ.ಎಲ್. ನಗರದ ಕಿಣಿ ಲೇಔಟ್ನಲ್ಲಿ ಹಿರಿಯ ಪತ್ರಕರ್ತ ಶಿ.ಜು.ಪಾಶಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳುವಾಗಿದೆ.
ಶಿ.ಜು.ಪಾಶಾ ಅವರು ಕುಟುಂಬ ಸಮೇತರಾಗಿ ತಮ್ಮ ತಂದೆಯ ಮನೆಯಲ್ಲಿ ಆಯೋಜಿಸಲಾಗಿದ್ದ ಕುರಾನ್ ಪಠಣ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದ ಬಳಿಕ ಪಾಶಾ ಅವರು ತಮ್ಮ ಕಚೇರಿಗೆ ತೆರಳಿದ್ದರು. ಅವರ ಪತ್ನಿ ಸಂಜೆ ಸುಮಾರು 4 ಗಂಟೆಗೆ ಮನೆಗೆ ವಾಪಸ್ ಬಂದಾಗ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ಒಳಗೆ ಹೋಗಿ ಪರಿಶೀಲಿಸಿದಾಗ ಬೆಡ್ರೂಮ್ನಲ್ಲಿದ್ದ ಬೀರು ಒಡೆದು, ಅದರಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದು ಹಣ ಕಳುವಾಗಿರುವುದು ತಿಳಿದುಬಂದಿದೆ.
ದೂರಿನ ಪ್ರಕಾರ, 29 ಗ್ರಾಂ ತೂಕದ ನೆಕ್ಲೇಸ್, 15 ಗ್ರಾಂ ತೂಕದ ಹ್ಯಾಂಗಿಂಗ್ಸ್, 8 ಗ್ರಾಂ ತೂಕದ ಬ್ರೇಸ್ಲೆಟ್, 10 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 200 ಗ್ರಾಂ ತೂಕದ ಮೂರು ಜೊತೆ ಬೆಳ್ಳಿ ಕಾಲುಚೈನ್ಗಳು ಹಾಗೂ ₹1.50 ಲಕ್ಷ ನಗದು ಹಣ ಕಳವಾಗಿದೆ.
ಒಟ್ಟು ಸುಮಾರು ₹6.57 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

