ರಿಪ್ಪನ್‌ಪೇಟೆ ; ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಸರ್ಕಾರಿ ಆಸ್ಪತ್ರೆ ವೈದ್ಯ ಸಾವು !

0 59

ರಿಪ್ಪನ್‌ಪೇಟೆ : ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಚಲಿಸುತಿದ್ದ ರೈಲಿನಿಂದ ಬಿದ್ದು ಪಟ್ಟಣದ ಶಬರೀಶನಗರದ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಶಬರೀಶನಗರದ ಡಾ. ಗುರುರಾಜ್ ((46) ಮೃತಪಟ್ಟ ದುರ್ಧೈವಿಯಾಗಿದ್ದು, ಶುಕ್ರವಾರ ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ರೈಲಿನಲ್ಲಿ ಸಂಚರಿಸುತಿದ್ದಾಗ ಕ್ಯಾತಸಂದ್ರದ ಬಳಿ ರೈಲಿನ ಬಾಗಿಲು ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಡಾ. ಗುರುರಾಜ್ ರಿಪ್ಪನ್‌ಪೇಟೆ, ಹೊಸನಗರ ಮತ್ತು ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಹೊಸನಗರ ತಾಲೂಕಿನ ಸಂಪೆಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತಿದ್ದರು. ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ ಉನ್ನತ ಶಿಕ್ಷಣವಾದ ಎಂ.ಡಿ ಮುಗಿಸಿದ್ದರು.

ರಿಪ್ಪನ್‌ಪೇಟೆ ಪಟ್ಟಣದ ಶಬರೀಶನಗರದ ನಿವೃತ ಶಿಕ್ಷಕ ದಿ|| ಗಂಗಾಧರಪ್ಪ ರವರ ಪುತ್ರರಾದ ಡಾ. ಗುರುರಾಜ್ ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಮೃತದೇಹವನ್ನು ತುಮಕೂರಿನಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ರಿಪ್ಪನ್‌ಪೇಟೆಯ ಸರ್ಕಾರಿ ಆಸ್ಪತೆಯಲ್ಲಿ ಅಂತಿಮ ದರ್ಶನಕ್ಕೆ ತರಲಾಗಿತ್ತು ಈ ಸಂಧರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವೈದ್ಯರ ಮೃತದೇಹದ ಅಂತಿಮ ದರ್ಶನ ಪಡೆದರು.

ಶಬರೀಶನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಂತರ ದಾವಣಗೆರೆಯ ನೆಲ್ಕುದುರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!