ಅಕ್ರಮ ಭೂ ಮಂಜೂರಾತಿ ಪ್ರಕರಣ ; ಕಡೂರಿನ ಮಾಜಿ ತಹಶೀಲ್ದಾರ್ ಪೊಲೀಸ್ ಬಲೆಗೆ !
ಕಡೂರು: ಅಕ್ರಮ ಭೂ ಮಂಜೂರಾತಿ ಪ್ರಕರಣದ ಆರೋಪಿ ಈ ಹಿಂದಿನ ಕಡೂರು ತಾಲೂಕು ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಕಡೂರು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಸದ್ಯ ಕಾರವಾರದ ಸೀ ಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿರುವ ಜೆ. ಉಮೇಶ್ ಅವರು ಅಕ್ರಮ ಭೂ ಮಂಜೂರಾತಿ ಆರೋಪ ಎದುರಿಸುತ್ತಿದ್ದರು. ಇತ್ತೀಚೆಗೆ ಕಾರವಾರ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.
ಅಕ್ರಮ ಬಹುಮಂಜೂರಾತಿ ಸಂಬಂಧ ತರೀಕೆರೆ ಉಪವಿಭಾಗ ಅಧಿಕಾರಿ ಕಡೂರು ಪೊಲೀಸ್ ಠಾಣೆಯಲ್ಲಿ ಹಿಂದಿನ ತಹಸಿಲ್ದಾರ್ ಜೆ. ಉಮೇಶ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ತಹಸೀಲ್ದಾರ್ ಜೆ.ಉಮೇಶ್ ಕಣ್ಮರೆಯಾಗಿದ್ದರು.
ಅಕ್ರಮ ಭೂ ಮಂಜೂರಾತಿ ಪ್ರಕರಣದ ಆರೋಪಿ ಉಮೇಶ್ ರನ್ನು ಕಡೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿನ ಭೂ ಅಕ್ರಮ ಮಂಜೂರಾತಿ ಸಂಬಂಧ ಸರ್ಕಾರ 15 ಜನ ತಹಶೀಲ್ದಾರುಳ್ಳ ತಂಡವನ್ನು ರಚಿಸಿದ್ದು ಈ ತಂಡ ತನಿಖೆಯಲ್ಲಿ ನಿರತವಾಗಿದೆ. ತನಿಖೆಯಿಂದ ಅಪಾರ ಪ್ರಮಾಣದ ಅಕ್ರಮ ಭೂ ಮಂಜೂರಾತಿ ಬೆಳಕಿಗೆ ಬರುತ್ತಿದ್ದು ಸದ್ಯ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಜೆ. ಉಮೇಶ್ ರವರನ್ನು ಬಂಧನವಾಗಿದೆ. ಈ ಪ್ರಕರಣದ ಉಳಿದ ಇಬ್ಬರು ಅಧಿಕಾರಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.