ಹರತಾಳು ಹಾಲಪ್ಪನವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡದಂತೆ ವಿರೋಧಿ ಬಣ ಒತ್ತಡ

0 59

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ವಿರುದ್ದ ಬಿಜೆಪಿ ನಾಯಕರು, ಸಂಘ ಪರಿವಾರದ ಪ್ರಮುಖರು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡದಂತೆ ವಿರೋಧಿ ಬಣ ಒತ್ತಡ ಹಾಕಿದೆ.


ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿದ ವಿರೋಧಿ ಬಣ ಬಹಳಷ್ಟು ಹೊತ್ತು ಚರ್ಚೆ ನಡೆಸಿದೆ.

ಮುಖ್ಯವಾಗಿ ಎಲ್ಲರ ಮಾತುಗಳನ್ನೂ ಬಿಎಸ್‌ವೈ ಸಮಾಧಾನ ಚಿತ್ತರಾಗಿ ಕೇಳಿಸಿಕೊಂಡಿದ್ದಾರೆ ಎನ್ನುವುದೇ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

2008ರಿಂದಲೂ ನಿಮ್ಮ ಗರಡಿಯಲ್ಲೇ ಬೆಳೆದಿರುವ ಹಾಲಪ್ಪನವರು ಪ್ರಬುದ್ಧ ರಾಜಕಾರಣಿಯಂತೆ ಕಾಣಿಸುತ್ತಾರೆ. ಇಲ್ಲಿ ಒಂದು ಬಾರಿ ಗೆದ್ದು ಜನಾಂಗೀಯ ಹಲ್ಲೆ ಮಾಡಿಸಿರುವ ಅವರು, ಮತ್ತೊಮ್ಮೆ ಗೆದ್ದರೆ ಸಾಗರವನ್ನೇ ದೋಚಿಬಿಡುತ್ತಾರೆ. 2011ರಲ್ಲಿ ನಿಮಗೆ ಮನಸ್ಸಿಲ್ಲದಿದ್ದರೂ ನಾವೇ ಹಠ ಮಾಡಿ ಹಾಲಪ್ಪನವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದೆವು. ಆದರೆ, ನಂತರ ಅವರ ಅವಾಂತರ ಮಿತಿ ಮೀರಿದೆ. ಹಾವಳಿ ತಡೆಯಲು ನಮಗೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಕ್ಷ, ತತ್ವಸಿದ್ಧಾಂತಗಳಿಗೆ ಬದ್ಧರಾಗಿರುವ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಟಿಕೆಟ್ ಕೊಡಿ ಎಂದು ವಿರೋಧಿಗಳು ಮಾಜಿ ಸಿಎಂ ಎದುರು ಒಕ್ಕೊರಲ ಮನವಿ ಮಾಡಿದ್ದಾರೆ.

ಕೇವಲ ದೂರುಗಳನ್ನು ಮಾತ್ರ ಹೊತ್ತೊಯ್ಯದೆ, ಅವೆಲ್ಲಕ್ಕೂ ಹತ್ತಾರು ಸಾಕ್ಷಿಗಳನ್ನು ಒದಗಿಸಿದ್ದಾರೆ. ಸದ್ಯ ಹಾಲಪ್ಪನವರನ್ನು ಮಾತನಾಡಿಸುವುದು ಕಷ್ಟ ತಮ್ಮದೇ ಗುಂಪು ಕಟ್ಟಿಕೊಂಡು ತಿರುಗುತ್ತಾರೆ. ಹಿಂದೂಪರ ಸಂಘಟನೆಗಳ ಕಾರ್ಯಕ್ರಮಕ್ಕೆ ಬಾರದಿರುವುದು, ಪ್ರಮುಖವಾಗಿ ಲಕ್ಷ್ಮೀ ಪೂಜೆಗೂ ಆಗಮಿಸದೆ ಅಸಡ್ಡೆ ಮಾಡಿದ್ದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ, ಪರ್ಸೆಂಟೇಜ್ ರಾಜಕೀಯ, ಅವರ ಆಪ್ತರ ಅಹಂಕಾರದ ಮಾತುಗಳು, ಹೀಗೆ ಪಟ್ಟಿ ದೊಡ್ಡದಿದೆ. ಜತೆಯಲ್ಲಿ ಶಾಸಕರನ್ನು ಸಂಘಟನೆಯ ಬೇರ್ಪಡಿಸುವ ಹಿರಿಯರಿಂದ ಪಿತೂರಿಯಲ್ಲಿ ಕೆಲ ಆಪ್ತರ ಹಿತ್ತಾಳೆ ಕಿವಿ ಕಾರಣವಾಗಿದೆ.


ಹಾಲಪ್ಪನವರ ವಿರುದ್ಧ ದೂರು ನೀಡಿದವರ ವಿರುದ್ಧ ಹಲ್ಲೆ ನಡೆಸುವುದು, ಅವರ ಜಾಗಕ್ಕೆ ತೊಂದರೆ ಕೊಡುವುದು, ಹೆದರಿಸುವಂಥ ಚಟುವಟಿಕೆಗಳೂ ನಡೆಯುತ್ತಿವೆ. ಆದ್ದರಿಂದ ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಇದನ್ನು ಸರಿಪಡಿಸುವ ಉದ್ದೇಶದಿಂದ ಹೊಸಬರನ್ನು ಆಯ್ಕೆ ಮಾಡಬೇಕು ಎಂದು ಎಲ್ಲರೂ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.


ಈ ತಂಡ ಇಷ್ಟಕ್ಕೆ ಸುಮ್ಮನಾಗದೆ ಎಲ್ಲ ದಾಖಲೆಗಳನ್ನು ಹಿಂದಿಗೆ ಭಾಷಾಂತರಿಸಿ ಕೇಂದ್ರ ನಾಯಕರಿಗೆ ಮತ್ತು ಸಂಘದ ಹಿರಿಯರಿಗೆ ಕಳುಹಿಸುವ ಸಿದ್ಧತೆಯಲ್ಲಿ ತೊಡಗಿದೆ. ವಿಶೇಷವೆಂದರೆ ಮಾಜಿ ಸಿಎಂ ಹಾಗೂ ವಿಜಯೇಂದ್ರ ಅವರು ಈ ಎಲ್ಲ ಆರೋಪಗಳನ್ನು ಸಮಾಧಾನದಿಂದ ಆಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸಾಗರದ ಆಶ್ರಯ ಸಮಿತಿ ಅಧ್ಯಕ್ಷ ಯು.ಎಚ್. ರಾಮಪ್ಪ, ಹಿರಿಯ ವಕೀಲ ಮತ್ತು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಶ್ರೀಧರ್, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ವೀರಶೈವ ಮುಖಂಡರಾದ ಜಗದೀಶ್ ಗೌಡ, ಕುಮಾರ್, ವಸಂತ್ ಬಿಜೆಪಿ ಮುಖಂಡರಾದ ಸತೀಶ್ ಹಕ್ರೆ, ರಾಘವೇಂದ್ರ ಶೇಟ್, ಕೃಷ್ಣಮೂರ್ತಿ ಮಂಕಳಲೆ ಮತ್ತಿತರ ಮುಖಂಡರು ನಿಯೋಗದಲ್ಲಿ ಇದ್ದರು.

Leave A Reply

Your email address will not be published.

error: Content is protected !!