ಇಸ್ಲಾಂ ಧರ್ಮದ ಪವಿತ್ರ ಹಬ್ಬ ರಂಜಾನ್ ; ಮುಫ್ತಿ ಮೊಹಮ್ಮದ್ ಇಮ್ತಿಯಾಝ್
ಹೊಸನಗರ : ಪ್ರಪಂಚಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ (ರಂಜಾನ್) ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈದ್-ಉಲ್-ಫಿತರ್ ಇಸ್ಲಾಂ ಧರ್ಮದಲ್ಲಿ ಆಚರಿಸಲಾಗುವ ಪವಿತ್ರ ಹಬ್ಬಗಳಲ್ಲಿ ಒಂದು.
ರಂಜಾನ್ ನ 30 ದಿನಗಳ ಉದ್ದಕ್ಕೂ ಮುಸ್ಲಿಮರು ದೇಹದಂಡನೆಯೊಂದಿಗೆ ಉಪವಾಸ ಆಚರಿಸುವ ಮೂಲಕ ಈ ತಿಂಗಳನ್ನು ವರ್ಷದ ಪವಿತ್ರ ತಿಂಗಳಾಗಿಸುತ್ತಾರೆ ಎಂದು ಹೊಸನಗರದ ಐತಿಹಾಸಿಕ ಪುರಾತನ ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ) ಯ ಖತೀಬರಾದ ಜನಾಬ್ ಮುಫ್ತಿ ಮೊಹಮ್ಮದ್ ಇಮ್ತಿಯಾಝ್ ರವರು ಹೇಳಿದರು.
ಇಂದು ಹೊಸನಗರದ ಹಳೆ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ವಿಶೇಷ ನಮಾಜ್ ನಿರ್ವಹಿಸಿ ಮಾತನಾಡಿದ ಅವರು, ಈ ತಿಂಗಳಲ್ಲಿ, ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ಸೂರ್ಯಾಸ್ತದವರೆಗೆ ಉಪವಾಸ ಇರುತ್ತಾರೆ.
ಮುಸ್ಲಿಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಪವಿತ್ರ ರಂಜಾನ್ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗೊಳಿಸಲಾಗುತ್ತದೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಉಪವಾಸ ಮಾಡುವುದರಿಂದ ಕಷ್ಟಸಂಕಷ್ಟಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಸಿರಿವಂತರು ಬಡವರಿಗೆ ಝಕಾತ್ ನೀಡುವುದೂ ಮತ್ತು ಕಡುಬಡವರಿಗೆ ಫಿತ್ರ್ ನೀಡುವುದು ಈ ಹಬ್ಬದ ಬಹು ವಿಶೇಷವಾದ ಸಂಗತಿಗಳಾಗಿವೆ ಎಂದರು.
ಮಸೀದಿಯ ಹಾಫಿಜ್ ಅಬ್ದುಲ್ಲಾ, ಮೌಜನ್ ಅಬುತಾಲಿಬ್, ಕಮಿಟಿಯ ಅಧ್ಯಕ್ಷರಾದ ಬಾಷಾ ಸಾಬ್, ಕಾರ್ಯದರ್ಶಿಗಳಾದ ರಝಾಕ್ ಸಾಬ್, ಸದಸ್ಯರುಗಳಾದ ಎಸ್.ಎಂ.ಸಲೀಂ, ಕೆ.ಇಲಿಯಾಸ್, ನಿಸಾರ್, ಅಬ್ರಾರ್, ಶಾಬುದ್ದೀನ್, ಅಬ್ದುಲ್ ಕರೀಂ, ಪ್ರಮುಖರಾದ ಬಾಷಾ ಸಾಬ್,ಎಂ,ಡಿ. ಉಸ್ಮಾನ್, ಶಾವಿಲ್ ಸಾಬ್, ಗನಿ ಸಾಬ್, ಶರೀಫ್ ಸಾಬ್, ಮೊಹಮ್ಮದ್ ಅಲಿ, ಜಿ.ಕೆ. ಅನ್ವರ್ ಬಾಷಾ, ರಿಜ್ವಾನ್ ಸಾಬ್, ಕೆ. ಅಮೀರ್,ಹಬೀಬುಲ್ಲಾ, ಖುರೇಷಿ ಮತ್ತಿತರರು ಹಾಜರಿದ್ದರು.